ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಯುವ ಆಟಗಾರ ಪೃಥ್ವಿ ಶಾ ಅವರ ಕನಸಿಗೆ ಪೆಟ್ಟು ಬೀಳುತ್ತಲೇ ಬಂದಿದೆ. ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಪೃಥ್ವಿ, ಏಕದಿನ ತಂಡ ಸೇರುವ ಕನಸಿನಲ್ಲಿದ್ದರು. ಆದರೆ ಆ ಕನಸು ದೂರ ಸರಿಯಿತು.
ವೆಸ್ಟ್ ಇಂಡೀಸ್ ಪ್ರವಾಸ ಬೆಳೆಸಬೇಕು ಎಂದು ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿರುವಾಗಲೇ, ಆಯ್ಕೆದಾರರು ಶಾಕ್ ನೀಡಿದರು. ಇದನ್ನೆಲ್ಲಾ ಲೆಕ್ಕಿಸದ ಪೃಥ್ವಿ ಸತತ ಪರಿಶ್ರಮ ಪಟ್ಟು, ಅಭ್ಯಾಸ ನಡೆಸಿದರು. ಇದರ ಫಲವಾಗಿಯೇ ಇಂಗ್ಲೆಂಡ್ ನೆಲ್ಲದಲ್ಲಿ ಮುಂಬೈ ಬ್ಯಾಟರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಂಗ್ಲರ ನೆಲದಲ್ಲಿ ಹಲವು ದಾಖಲೆ ಬರೆದ ಪೃಥ್ವಿ ಶಾ, ಏಕದಿನ ವಿಶ್ವಕಪ್ಗೆ ತಾನು ಸಮರ್ಥ ಆಟಗಾರ ಎನ್ನುವ ಸಂದೇಶವನ್ನು ಬಿಸಿಸಿಐಗೆ ರವಾನಿಸಿದ್ದಾರೆ.

ನಾರ್ಥಾಂಪ್ಟನ್ ಕೌಂಟಿ ಮೈದಾನದಲ್ಲಿ ಬುಧವಾರ ನಡೆದ ಏಕದಿನ ಕಪ್ ಟೂರ್ನಿಯಲ್ಲಿ ಸೋಮರ್ಸೆಟ್ ವಿರುದ್ಧ ನಾರ್ಥಾಂಪ್ಟನ್ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಡಬಲ್ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಕೇವಲ 129 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ದಾಖಲೆ ಬರೆದರು. ಇದರಲ್ಲಿ 24 ಬೌಂಡರಿ, 8 ಭರ್ಜರಿ ಸಿಕ್ಸರ್ ಸೇರಿದ್ದವು.
ಪೃಥ್ವಿ ಶಾ 81 ಎಸೆತಗಳಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ 153 ಎಸೆತಗಳಲ್ಲಿ 28 ಬೌಂಡರಿ, 11 ಸಿಕ್ಸರ್ ಸಹಿತ 244 ರನ್ ಗಳಿಸಿದರು. ಈ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ದಾಖಲೆಯನ್ನು ಮುಂಬೈ ಬ್ಯಾಟರ್ ಬರೆದರು. ಅವರು ಆಲಿ ರಾಬಿನ್ಸನ್ ಅವರ 206 ದಾಖಲೆಯನ್ನು ಅಳಿಸಿದರು.
ಪೃಥ್ವಿ ತಮ್ಮ ಲಿಸ್ಟ್ ಎ ವೃತ್ತಿಜೀವನದ ಎರಡನೇ ದ್ವಿಶತಕ ಗಳಿಸಿದ್ದಾರೆ. ಪುದುಚೇರಿ ವಿರುದ್ಧ 2020-21 ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಆಟಗಾರ ಮೊದಲ ದ್ವಿಶತಕವನ್ನು ಬಾರಿಸಿದ್ದರು. ಆಗ ಮುಂಬೈ ಪರ ಶಾ ಅಜೇಯ 227 ರನ್ ಸಿಡಿಸಿದ್ದರು.
ಇಂಗ್ಲೆಂಡ್ನ ನಡೆಯುತ್ತಿರುವ ಏಕದಿನ ಕಪ್ನಲ್ಲಿ ನಾರ್ಥಾಂಪ್ಟನ್ ಶೈರ್ ಎರಡನೇ ಅತ್ಯಧಿಕ ಸ್ಕೋರ್ ದಾಖಲಿಸಿತು. 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 415 ರನ್ ಗಳಿಸಿತು. ಪೃಥ್ವಿ ಶಾ 'ಲಿಸ್ಟ್ ಎ' ಏಕದಿನ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಆರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ತಮಿಳುನಾಡಿನ ನಾರಾಯಣ ಜಗದೀಶನ್ ಮೊದಲಸ್ಥಾನದಲ್ಲಿದ್ದಾರೆ. ಇವರು ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶದ ವಿರುದ್ಧ 277 ರನ್ ಗಳಿಸಿದ್ದರು.
ಆಗಸ್ಟ್ 31ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಪೃಥ್ವಿ ಶಾಗೆ ಅವಕಾಶ ಸಿಕ್ಕಿಲ್ಲ. ಆದರೆ ಅವರ ಇಂಗ್ಲೆಂಡ್ನಲ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿ ಅವರಿಗೆ ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗುತ್ತಾ ಎಂದು ಕಾದು ನೋಡಬೇಖಿದೆ. ಇಂಗ್ಲೆಂಡ್ ನೆಲದಲ್ಲಿ ಅಬ್ಬರಿಸುವ ಪೃಥ್ವಿ ಶಾ ಭಾರತೀಯ ಬ್ಯಾಟರ್ ಗಳಿಗೆ ಸವಾಲೆನಿಸುವ ಬೌನ್ಸಿ ಪಿಚ್ಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
ಅಂಡರ್ 19 ವಿಶ್ವಕಪ್ನಲ್ಲಿ ಮಿಂಚು ಹರಿಸಿದ್ದ ಅವರು, ಭಾರತ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಇದೇ ರೀತಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದರೆ ವಿಶ್ವಕಪ್ ಬಳಿಕವಾದರೂ ಅವರು ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.