ಮೊಹಾಲಿ: ಭರವಸೆಯ ಬ್ಯಾಟರ್ ಕೆಎಲ್ ರಾಹುಲ್ ಬಾರಿಸಿದ ಅರ್ಧಶತಕ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಇನಿಂಗ್ಸ್ ಮುನ್ನಡೆಯ ಕನಸು ಕಾಣುತ್ತಿದೆ.
ಶುಕ್ರವಾರ ನಡೆದ ಎರಡನೇ ದಿನದಾಟದಲ್ಲಿ ಪಂಜಾಬ್ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 303 ರನ್ಗಳಿಂದ ಆಟ ಮುಂದುವರೆಸಿತು. ಎರಡನೇ ದಿನದಾಟದಲ್ಲಿ ಪಂಜಾಬ್ ಕೇವಲ 1 ಓವರ್ ಆಡಿ ಔಟ್ ಆಯಿತು. ಅಂತಿಮವಾಗಿ ಪಂಜಾಬ್ 309 ರನ್ಗಳಿಗೆ ಆಲೌಟ್ ಆಯಿತು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಎಮನ್ಜೋತ್ ಸಿಂಗ್ ಚಾಹಲ್ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 83 ರನ್ ಸಿಡಿಸಿದರು. ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 4, ಶ್ರೇಯಸ್ ಗೋಪಾಲ್ 3, ಮೊಹ್ಸಿನ್ ಖಾನ್ 2 ವಿಕೆಟ್ ಉರಳಿಸಿದರು.

ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಅನುಭವಿ ಆಟಗಾರರಾ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಆಡಿದ ಜೋಡಿ ಅಬ್ಬರಿಸಿತು. ಈ ಜೋಡಿ ಪಂಜಾಬ್ ತಂಡದ ತಂತ್ರವನ್ನು ಅರಿತು ಬ್ಯಾಟ್ ಮಾಡಿತು. ಅಲ್ಲದೆ ಆರಂಭದಲ್ಲಿ ಕರ್ನಾಟಕ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ಈ ಜೋಡಿ ಸಫಲವಾಯಿತು. ಮೊದಲ ವಿಕೆಟ್ಗೆ ರಾಹುಲ್ ಹಾಗೂ ಮಯಾಂಕ್ 21.3 ಓವರ್ಗಳಲ್ಲಿ 102 ರನ್ ಸೇರಿಸಿತು. ಈ ಹಂತದಲ್ಲಿ ಮಯಾಂಕ್ ಅಗರ್ವಾಲ್ 46 ರನ್ ಸೇರಿಸಿದ್ದಾಗ ಜಶನ್ಪ್ರೀತ್ ಸಿಂಗ್ ಹಿಡಿದ ಉತ್ತಮ ಕ್ಯಾಚ್ಗೆ ಬಲಿಯಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರುವ ಅನುಭವ ಹೊಂದಿದ್ದ ಕೆಎಲ್ ರಾಹುಲ್ 5 ಬೌಂಡರಿ ನೆರವಿನಿಂದ 59 ರನ್ ಬಾರಿಸಿದ್ದಾಗ, ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ಬೋಲ್ಡ್ ಆದರು. ಮಧ್ಯಮ ಕ್ರಮಾಂಕದಲ್ಲಿ ಕೆವಿ ಅನೀಶ್ 32, ನಾಯಕ ದೇವದತ್ ಪಡಿಕ್ಕಲ್ 9, ರವಿಚಂದ್ರನ್ ಸ್ಮರಣ್ 9, ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
6ನೇ ವಿಕೆಟ್ಗೆ ಶ್ರೇಯಸ್ ಗೋಪಾಲ್ ಹಾಗೂ ಕೃತಿಕ್ ಕೃಷ್ಣ ಜೋಡಿ 47 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಹಂತದಲ್ಲಿ ಕೃತಿಕ್ ಕೃಷ್ಣ 28 ರನ್ ಬಾರಿಸಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ವಿದ್ಯಾಧರ್ ಪಾಟೀಲ್ (ಅಜೇಯ 23), ಶ್ರೇಯಸ್ ಗೋಪಾಲ್ (ಅಜೇಯ 42) ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲರಾದರು. ಈ ಜೋಡಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಶನಿವಾರ ಮೊದಲಾವಧಿಯಲ್ಲಿ ಕರ್ನಾಟಕ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ಇನಿಂಗ್ಸ್ ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ. ಕರ್ನಾಟಕ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ಮುಂದಿನ ಹಾದಿ ಸುಗಮ. ಇನಿಂಗ್ಸ್ ಮುನ್ನಡೆ ಸಾಧಿಸಿದರೆ ಬೇರೆ ತಂಡಗಳ ಫಲಿತಾಂಶವನ್ನು ಕಾದು ನೋಡಬೇಕಾಗುತ್ತದೆ.