ಭಾನುವಾರ ಮೇ 3, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಎದುರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಸಾಧಾರಣ ಮೊತ್ತ ಪೇರಿಸಿದೆ.
ಪಂಜಾಬ್ ತಂಡದ ಸಂಘಟಿಕ ಬೌಲಿಂಗ್ ದಾಳಿಗೆ ಚೆನ್ನೈ ಬ್ಯಾಟರ್ ಬೆಚ್ಚಿದರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೆ ಸಿಎಸ್ಕೆ ಶಕ್ತವಾಯಿತು. ಪಂಜಾಬ್ ಗೆಲುವಿಗೆ 168 ರನ್ಗಳ ಅವಶ್ಯಕತೆ ಇದೆ.

ಪಂಜಾಬ್ ಕಿಂಗ್ಸ್ ಎದುರು ಟಾಸ್ ಸೋತು ಬ್ಯಾಟಿಂಗ್ಗಿಳಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. 9 ರನ್ ಗಳಿಸಿ ಆರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ ಅವರು ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಮತ್ತು ನಾಯಕ ಋರುತುರಾಜ್ ಗಾಯಕ್ವಾಡ್ ಸೇರಿ ಸಿಎಸ್ಕೆಗೆ ನಿಧಾನವಾಗಿ ರನ್ ಗಳಿಸಿದರು.
ಈ ವೇಳೆ 4 ಬೌಂಡರಿ ಮತ್ತು 1 ಸಿಕ್ಸರ್ ಹೊಡೆದು ಫಾರ್ಮಾನಲ್ಲಿದ್ದ ಋತುರಾಜ್ (32) ರಾಹುಲ್ ಚಹರ್ ಸ್ಪಿನ್ ಮೋಡಿಗೆ ಬಲಿಯಾದರು. ಬಳಿಕ ಬಂದ ಶಿವಂ ದುಬೆ ಸಹಾ ಅದೇ ಓವರ್ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಡೇರಿಲ್ ಮಿಚೆಲ್ (30) ಕೂಡ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಎಲ್ಬಿಡ್ಲ್ಯೂ ಆಗಿ ಹೊರ ನಡೆದರು.

ನಂತರ ಬಂದ ಸಿಎಸ್ಕೆ ಬ್ಯಾಟರ್ಸ್ ಯಾರು ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಮೊಯಿನ್ ಅಲಿ (17) ಸ್ಯಾಮ್ ಕರ್ರನ್ಗೆ ಔಟ್ ಆದರೆ, ಮಿಚೆಲ್ ಸ್ಯಾಂಟ್ನರ್ (11) ರಾಹುಲ್ ಚಹರ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಸ್ಟಾರ್ ಆಲ್ ರೌಂಡರ್ ರವೀಂದ್ರ ಕುಸಿದ ಸಿಎಸ್ಕೆಗೆ ನೆರವಾದರು. 26 ಎಸೆತಗದಲ್ಲಿ 3 ಬೌಂಡರಿ ಹಾಗು 2 ಸಿಕ್ಸರ್ ಬಾರಿಸುವ ಮೂಲಕ 43 ರನ್ ಗಳಿಸಿದರು.
ಆದರೆ ತಂಡದ ಮೊತ್ತ ಹೆಚ್ಚಿಸುವ ಆತುರದಲ್ಲಿ ಅರ್ಶ್ದೀಪ್ ಸಿಂಗ್ ಬೌಲಿಂಗ್ ವಿಕೆಟ್ ಕಳೆದುಕೊಂಡರು. ಹರ್ಷಲ್ ಪಟೇಲ್ ಒಂದೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ (17) ಮತ್ತು ಎಂಎಸ್ ಧೋನಿ (೦) ಅವರನ್ನು ಹೊರ ಕಳುಹಿಸಿದರು. ಕೊನೆಯಲ್ಲಿ ರಿಚರ್ಡ್ ಗ್ಲೀಸನ್ 2 ರನ್ ಮತ್ತು ತುಷಾರ್ ದೇಶಪಾಂಡೆ (೦) ಅಜೇಯರಾಗುಳಿದರು.
ಪಂಜಾಬ್ ಪರ ಬೌಲಿಂಗ್ನಲ್ಲಿ ಮಿಂಚಿದ ಹರ್ಷಲ್ ಪಟೇಲ್ ಮತ್ತು ರಾಹುಲ್ ಚಹರ್ ತಲಾ 3 ವಿಕೆಟ್ ಪಡೆಯುವ ಮೂಲಕ ಚೆನ್ನೈ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಇನ್ನೊಂದೆಡೆ ಅರ್ಶ್ದೀಪ್ ಸಿಂಗ್ 2 ವಿಕೆಟ್ ಹಾಗು ಸ್ಯಾಮ್ ಕರ್ರನ್ 1 ವಿಕೆಟ್ ಉರುಳಿಸಿದರು.