For Quick Alerts
ALLOW NOTIFICATIONS  
For Daily Alerts
 

ಚತುಷ್ಕೋನ ಕ್ರಿಕೆಟ್ ಸರಣಿ: ಭಾರತಕ್ಕೆ ಡಬಲ್ ಧಮಾಕಾ!

ಬೆಂಗಳೂರು, ಆಗಸ್ಟ್ 23: ಚತುಷ್ಕೋನ ಸರಣಿಯ ಏಕದಿನ ಪಂದ್ಯಗಳಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳೆರಡೂ ಗೆಲುವು ಕಂಡಿವೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ ಆಸ್ಟ್ರೇಲಿಯಾ ಎ ತಂಡವನ್ನು ಸೋಲಿಸಿದರೆ, ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಬಿ ತಂಡ ದಕ್ಷಿಣ ಆಫ್ರಿಕಾ ಎ ತಂಡವನ್ನು ಮಣಿಸಿತು.

ಎರಡೂ ಪಂದ್ಯಗಳಲ್ಲಿ ಕನ್ನಡಿಗರು ಮಿಂಚಿದ್ದು ವಿಶೇಷ. ಎ ತಂಡದಲ್ಲಿ ಸ್ಪಿನ್ನರ್ ಕೆ. ಗೌತಮ್ ಮೂರು ವಿಕೆಟ್ ಕಬಳಿಸಿ ಗಮನ ಸೆಳೆದರೆ, ಬಿ ತಂಡದ ನಾಯಕ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ, ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕೂಡ ಮಿಂಚಿದರು. ಎ ತಂಡ ಆರ್. ಸಮರ್ಥ್ ಮತ್ತು ಬಿ ತಂಡದ ಮಯಂಕ್ ಅಗರ್ವಾಲ್ ವೈಫಲ್ಯ ಅನುಭವಿಸಿದರು.

ಸರಣಿಯ ಮೊದಲ ಆರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಹೀಗಾಗಿ ಉಳಿದ ಪಂದ್ಯಗಳನ್ನು ವಿಜಯವಾಡದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.

ಗೌತಮ್, ಸಿರಾಜ್ ಕೈಚಳಕ

ಗೌತಮ್, ಸಿರಾಜ್ ಕೈಚಳಕ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡಿಗ ಕೆ. ಗೌತಮ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಎ ಕೇವಲ 151 ರನ್‌ಗಳಿಗೆ ಆಲೌಟ್ ಆಯಿತು. ಸುಲಭದ ಗುರಿ ಬೆನ್ನತ್ತಿದ ಭಾರತ ಎ ಅಂಬಾಟಿ ರಾಯುಡು ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋದ ತಂಡಕ್ಕೆ ಕೊನೆಯಲ್ಲಿ ಆಷ್ಟನ್ ಅಗರ್ ಆಧಾರವಾದರು. ಹೀಗಾಗಿ ಆಸೀಸ್ 150ರ ಗಡಿ ದಾಟಲು ಸಾಧ್ಯವಾಯಿತು.

ಕ್ರಿಕೆಟ್: ವಿಜಯ್, ಕುಲದೀಪ್‌ಗೆ ಕೊಕ್: ಪೃಥ್ವಿ ಶಾ, ಹನುಮ ವಿಹಾರಿ ತಂಡಕ್ಕೆ ಸೇರ್ಪಡೆ

ರಾಯುಡು-ಪಾಂಡ್ಯ ಆಸರೆ

ರಾಯುಡು-ಪಾಂಡ್ಯ ಆಸರೆ

ಸುಲಭದ ಗುರಿ ಬೆನ್ನತ್ತಿದ ಭಾರತ ಎ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತು. ಝೆ ರಿಚರ್ಡ್ಸನ್ ಬೌಲಿಂಗ್‌ನಲ್ಲಿ ರವಿಕುಮಾರ್ ಸಮರ್ಥ್ ನೀಡಿದ ಕ್ಯಾಚನ್ನು ಮೈಕಲ್ ನೆಸೆರ್ ಅದ್ಭುತವಾಗಿ ಜಿಗಿದು ಹಿಡಿತಕ್ಕೆ ಪಡೆದರು. ಅದರ ಮರು ಎಸೆತದಲ್ಲಿಯೇ ಸಂಜು ಸ್ಯಾಮ್ಸನ್ ಬೌಲ್ಡ್ ಆದರು.

ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಒಂದು ಹಂತದಲ್ಲಿ 29ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅಂಬಾಟಿ ರಾಯುಡು ಮತ್ತು ಕೃನಾಲ್ ಪಾಂಡ್ಯ ನೆರವಾದರು. ಇಬ್ಬರೂ ಐದನೇ ವಿಕೆಟ್‌ಗೆ 109 ರನ್‌ಗಳ ಮಹತ್ವದ ಜತೆಯಾಟ ನೀಡಿದರು.

ಕೃನಾಲ್ ಪಾಂಡ್ಯ ಕೇವಲ ಒಂದು ರನ್‌ನಿಂದ ಅರ್ಧಶತಕ ತಪ್ಪಿಸಿಕೊಂಡರು. ಬಳಿಕ ರಾಯುಡು ಜತೆಗೂಡಿದ ನಿತೀಶ್ ರಾಣಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ತಾಳ್ಮೆಯ ಆಟವಾಡಿದ ಅಂಬಾಟಿ ರಾಯುಡು 62* (107) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಕೊಹ್ಲಿ ಶತಕಕ್ಕೂ 2001ರ ಸಚಿನ್ ಬಾರಿಸಿದ ಶತಕಕ್ಕೂ ಇದೆ ನಂಟು!

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಎ: 151/10 (31.4) ಟ್ರಾವಿಸ್ ಹೆಡ್ 28, ಆಷ್ಟನ್ ಅಗರ್ 34, ಮೈಜಲ್ ನೆಸೆರ್ 16, ಮೊಹಮ್ಮದ್ ಸಿರಾಜ್ 68/4, ಕೆ. ಗೌತಮ್ 31/3, ಕೃನಾಲ್ ಪಾಂಡ್ಯ 3/1

ಭಾರತ ಎ: 152/5 (38.3) ಅಂಬಾಟಿ ರಾಯುಡು 62*, ಕೃನಾಲ್ ಪಾಂಡ್ಯ 49, ಸೂರ್ಯಕುಮಾರ್ ಯಾದವ್ 15, ಝೆ ರಿಚರ್ಡ್ಸನ್ 27/3, ಡಿ ಆರ್ಸಿ ಶಾರ್ಟ್ 3/1

ಫಲಿತಾಂಶ: ಭಾರತ ಎ ತಂಡಕ್ಕೆ ಐದು ವಿಕೆಟ್ ಜಯ

ಪಾಂಡೆ ಭರ್ಜರಿ ಬ್ಯಾಟಿಂಗ್

ಪಾಂಡೆ ಭರ್ಜರಿ ಬ್ಯಾಟಿಂಗ್

ನಾಯಕ ಮನೀಶ್ ಪಾಂಡೆ (95*) ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಬಿ ತಂಡ ದಕ್ಷಿಣ ಆಫ್ರಿಕಾ ಎ ವಿರುದ್ಧ ಐದು ವಿಕೆಟ್‌ಗಳ ಜಯಭೇರಿ ಬಾರಿಸಿತು.

ಗೆಲುವಿಗೆ ಬೇಕಾಗಿದ್ದ 220 ರನ್ ಗುರಿ ಬೆನ್ನತ್ತಿದ ಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. 22 ರನ್ ಪೇರಿಸುವಷ್ಟರಲ್ಲಿ ಮಯಂಕ್ ಅಗರ್ವಾಲ್ ಮತ್ತು ದೀಪಕ್ ಹೂಡಾ ವಿಕೆಟ್ ಕಳೆದುಕೊಂಡು ಅಪಾಯದಲ್ಲಿ ಸಿಲುಕಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಸೇರಿಕೊಂಡ ನಾಯಕ ಮನೀಶ್ ಪಾಂಡೆ ತಂಡಕ್ಕೆ ನೆರವಾದರು.

88 ರನ್ ಜತೆಯಾಟ ನೀಡಿದ ಗಿಲ್ ಔಟಾದ ಬಳಿಕ ಕೇದಾರ್ ಜಾಧವ್ 23 (34) ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ 24 (34) ಅಲ್ಪಮಟ್ಟಿನ ಕೊಡುಗೆ ನೀಡಿದರು.

ಪಾಂಡೆ 105 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 95 ರನ್ ಗಳಿಸಿ ಅಜೇಯರಾಗಿ ಉಳಿದರು.

ಬೆಹರ್ಡೀನ್-ಮುತ್ತುಸಾಮಿ ಆಸರೆ

ಬೆಹರ್ಡೀನ್-ಮುತ್ತುಸಾಮಿ ಆಸರೆ

ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ಮನೀಶ್ ಪಾಂಡೆ ದಕ್ಷಿಣ ಆಫ್ರಿಕಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಬೌಲರ್‌ಗಳು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 57 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಫರ್ಹಾನ್ ಬೆಹರ್ಡೀನ್ ಮತ್ತು ಸೆನುರನ್ ಮುತ್ತುಸಾಮಿ ನೆರವಾದರು.

ಇಬ್ಬರೂ ಐದನೇ ವಿಕೆಟ್‌ಗೆ ಶತಕದ ಜತೆಯಾಟ ನೀಡಿದರು. ಎಂಟನೆಯ ವಿಕೆಟ್‌ಗೆ ಮಾಲುಸಿ ಸಿಬೊಟೊ ಹಾಗೂ ಡೇನ್ ಪ್ಯಾಟರ್ಸನ್ 41 ರನ್‌ಗಳನ್ನು ಸೇರಿಸಿ ಹೋರಾಟ ನಡೆಸಿದರು. ಇದರಿಂದ ದಕ್ಷಿಣ ಆಫ್ರಿಕಾ 231ರ ಮೊತ್ತ ತಲುಪಿತು.

ಮಳೆ ಕಾರಣ ಭಾರತದ ಇನ್ನಿಂಗ್ಸ್‌ನ ಐದು ಓವರ್‌ಗಳನ್ನು ಕಡಿತಗೊಳಿಸಿ 220 ರನ್ ಗುರಿ ನೀಡಲಾಗಿತ್ತು. ಗೆಲುವಿಗೆ 4.3 ಓವರ್‌ಗಳಲ್ಲಿ 6 ರನ್ ಬೇಕಿದ್ದಾಗ ಮತ್ತೆ ಮಳೆ ಆಟವಾಡಿತು. ಹೀಗಾಗಿ ಡಕ್ವರ್ಥ್ ನಿಯಮದಡಿ ಭಾರತವನ್ನು 30 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ ಎ: 231/10 (47.3) ಫರ್ಹಾನ್ ಬೆಹರ್ಡೀನ್ 43, ಸೆನುರನ್ ಮುತ್ತುಸಾಮಿ 55, ಮಲುಸಿ ಸಿಬೊಟೊ 26, ಪ್ರಸಿದ್ಧ್ ಕೃಷ್ಣ 49/4, ಶ್ರೇಯಸ್ ಗೋಪಾಲ್ 42/3, ಸಿದ್ಧಾರ್ಥ್ ಕೌಲ್ 26/1

ಭಾರತ ಬಿ: 214/5 (40.3) ಮನೀಶ್ ಪಾಂಡೆ 95*, ಶುಭ್‌ಮನ್ ಗಿಲ್ 42, ಇಶಾನ್ ಕಿಶಾನ್ 24, ಡೇನ್ ಪ್ಯಾಟರ್ಸನ್ 33/2, ಸೆನುರನ್ ಮುತ್ತುಸಾಮಿ 20/1

ಫಲಿತಾಂಶ: ಭಾರತ ಬಿ ತಂಡಕ್ಕೆ 30 ವಿಕೆಟ್ ಜಯ (ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ)

ಮುಂದಿನ ಪಂದ್ಯಗಳು

ಆಗಸ್ಟ್ 25
ಭಾರತ ಎ vs ಭಾರತ ಬಿ
ಆಲೂರು ಕ್ರೀಡಾಂಗಣ

ಆಸ್ಟ್ರೇಲಿಯಾ ಎ vs ದಕ್ಷಿಣ ಆಫ್ರಿಕಾ ಎ
ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಆಗಸ್ಟ್ 27
ಭಾರತ ಎ vs ದಕ್ಷಿಣ ಆಫ್ರಿಕಾ ಎ
ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಭಾರತ ಬಿ vs ಆಸ್ಟ್ರೇಲಿಯಾ ಎ
ಆಲೂರು ಕ್ರೀಡಾಂಗಣ

Story first published: Thursday, August 23, 2018, 18:29 [IST]
Other articles published on Aug 23, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+