
ಬೆಂಗಳೂರು, ಆಗಸ್ಟ್ 1: ಕೆಫೆ ಕಾಫೀ ಡೇ(ಸಿಸಿಡಿ)ಯಲ್ಲಿ ತಾನು ಕಳೆದ ದಿನಗಳನ್ನು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಮಿರಿಸಿಕೊಂಡಿದ್ದಾರೆ. ಸಿಸಿಡಿ ಸ್ಥಾಪಕ-ಮಾಲಕ ವಿಜಿ ಸಿದ್ಧಾರ್ಥ ಸಾವಿನ ಬಳಿಕ ಅಶ್ವಿನ್ ಟ್ವಿಟರ್ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.
ಸಿಸಿಡಿ ಮೂಲಕ ಪ್ರಚಲಿತರಾಗಿದ್ದ ಭಾರತದ ಉದ್ಯಮಿ, ಮೂಲತಃ ಕರ್ನಾಟಕದ ಚಿಕ್ಕಮಗಳೂರಿನವರಾದ ವಿಜಿ ಸಿದ್ಧಾರ್ಥ ಇತ್ತೀಚೆಗೆ ಸಾವನ್ನಪ್ಪಿದ್ದರು. ಅವರ ಮೃತದೇಶ ಮಂಗಳೂರಿನ ಹೊಯ್ಗೆ ಬಝಾರ್ ಸಮೀಪ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು.
ಬುಧವಾರ (ಜುಲೈ 31) ಸಿಸಿಡಿ ನೆನಪಿಸಿಕೊಂಡು ಟ್ವೀಟ್ ಮಾಡಿರುವ ಅಶ್ವಿನ್, 'ಸ್ನೇಹಿತರೊಂದಿಗೆ ಹೊರಗೆ ಹೋಗಿ ಒಂದು ಕಪ್ ಕಾಫಿ ಕುಡಿದ ನನ್ನ ಮೊದಲ ನೆನಪುಗಳು ಕೆಫೆ ಕಾಫಿ ಡೇ ಮೂಲಕ ಮಾತ್ರ ಶುರುವಾಗುತ್ತಿದ್ದವು. ಬೇಸರದ ಸುದ್ದಿಯಿದು' ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂಎಮ್ ಕೃಷ್ಣ ಅವರ ಅಳಿಯ ಆಗಿದ್ದ 58ರ ಹರೆಯದ ಸಿದ್ಧಾರ್ಥ, ಸೋಮವಾರ (ಜುಲೈ 29) ಸಂಜೆ ಮಂಗಳೂರಿನಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಬುಧವಾರ (ಜುಲೈ 31) ಬೆಳಗ್ಗೆ ಪತ್ತೆಯಾಗಿತ್ತು.