ಬ್ರಿಸ್ಬೇನ್ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಬುಧವಾರ ಮುಗಿದಿದೆ. ಈ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದು, ಸರಣಿ ಈಗಲೂ ಸಮಬಲದಲ್ಲಿ ಸಾಗುತ್ತಿದೆ. ಈ ಟೆಸ್ಟ್ ಮುಗಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ದಿಢೀರ್ ವಿದಾಯ ಹೇಳಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಆರ್ ಅಶ್ವಿನ್ ಇನ್ನು ಮುಂದೆ ಭಾರತದ ಪರ ಆಡುವುದಿಲ್ಲ ಎಂದು ಘೋಷಿಸುತ್ತಿದ್ದಂತೆ, ಅಭಿಮಾನಿಗಳ ಮನದಲ್ಲಿ ಮೂಡಿರುವ ಒಂದೇ ಒಂದು ಪ್ರಶ್ನೆ ಇವರ ರಿಪ್ಲೇಸ್ಮೆಂಟ್ ಯಾರು? ಅಶ್ವಿನ್ ಅವರಿಗೆ ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಕೇವಲ ಒಂದೇ ಒಂದು ಟೆಸ್ಟ್ ಪಂದ್ಯ ಆಡಲು ಅವಕಾಶ ಸಿಕ್ಕಿತ್ತು. ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಪಡೆದು ಬೀಗಿದ್ದಾರೆ. ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರರು ಯಾರು ಎಂಬ ಪ್ರಶ್ನೆ ನಿಶ್ಚಿತವಾಗಿ ಉದ್ಭವಿಸುತ್ತದೆ.

ಭಾರತದ ಸ್ಪಿನ್ ಪರಂಪರೆಯನ್ನು ಮುಂದುವರೆಸಿದ ದಿಗ್ಗಜ ಬೌಲರ್ಗಳಲ್ಲಿ ಅಶ್ವಿನ್ ಅವರಿಗೂ ಸ್ಥಾನವಿದೆ. ಇವರು ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್. ಇವರ ಸ್ಥಾನವನ್ನು ತುಂಬಲು ಇಬ್ಬರು ಯುವ ಆಟಗಾರರು ಸಿದ್ಧರಾಗಿದ್ದಾರೆ. ಇದರಲ್ಲಿ ಒಬ್ಬರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚು ಹರಿಸುತ್ತಿದ್ದು, ಇನ್ನೊಬ್ಬ ಪ್ಲೇಯರ್ ದೇಶೀಯ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ.
ಅಶ್ವಿನ್ ಸ್ಥಾನವನ್ನು ತುಂಬಲು ತಾವು ಸಿದ್ಧರಿರುವುದಾಗಿ ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಸಾರಿ ಹೇಳಿದ್ದಾರೆ. ಇವರು ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್ಗಳಲ್ಲಿ ಪದಾರ್ಪಣೆ ಮಾಡಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಸುಂದರ್ ಅದ್ಭುತ ಪ್ರದರ್ಶನ ನೀಡಿದ್ದರು.

ಅಶ್ವಿನ್ ಸ್ಥಾನದ ಮೇಲೆ ತನುಷ್ ಕೋಟ್ಯಾನ್ ಎಂಬ ಮುಂಬೈ ತಂಡದ ಯುವ ಸ್ಪಿನ್ ಬೌಲರ್ ಕಣ್ಣು ನೆಟ್ಟಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇರಾನಿ ಟ್ರೋಫಿಯಲ್ಲಿ 8ನೇ ಕ್ರಮಾಂಕದಲ್ಲಿ ಮುಂಬೈ ಪರ ಬ್ಯಾಟ್ ಮಾಡಿ ಶತಕ ಬಾರಿಸಿದ್ದಾರೆ. ಇವರು ಈ ವರೆಗೆ ಆಡಿದ 33 ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 1525 ರನ್ ಸಿಡಿಸಿದ್ದು, 101 ವಿಕೆಟ್ ಪಡೆದಿದ್ದಾರೆ.
ವಾಷಿಂಗ್ಟನ್ ಸುಂದರ್ ಭಾರತ ಪರ 7 ಟೆಸ್ಟ್ ಪಂದ್ಯಗಳಲ್ಲಿ ಮೈದಾನ ಪ್ರವೇಶಿಸಿದ್ದಾರೆ. ಇದರಲ್ಲಿ 24 ವಿಕೆಟ್ ಪಡೆದಿದ್ದಾರೆ. ಇನ್ನು 387 ರನ್ ಸಹ ಸಿಡಿಸಿದ್ದಾರೆ. 22 ಏಕದಿನ ಹಾಗೂ 52 ಟಿ20 ಪಂದ್ಯಗಳನ್ನು ಇವರು ಭಾರತದ ಪರ ಆಡಿದ್ದಾರೆ.