ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಗೆಲುವು ಸಾಧಿಸಿದೆ. 200 ರನ್ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಭಾರತ ತಂಡ ಆರಂಭದಲ್ಲಿ 2 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಅತ್ಯಂತ ಒತ್ತಡದಲ್ಲಿತ್ತು. ಆದರೆ ಆ ಸ್ಥಿತಿಯಿಂದ ತಂಡವನ್ನು ಪಾರು ಮಾಡಿದ್ದು ಮಾತ್ರವಲ್ಲದೆ ತಂಡದ ಗೆಲುವಿಗೂ ಕಾರಣವಾದರು.
ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಒತ್ತಡದ ಸಂದರ್ಭದಲ್ಲಿ ಕಣಕ್ಕಿಳಿದು ಬರೊಬ್ಬರಿ 165 ರನ್ಗಳ ಜೊತೆಯಾಟವನ್ನಾಡುವ ಮೂಲಕ ಈ ಗೆಲುವಿಗೆ ಕಾರಣವಾದರು. ಈ ಜೋಡಿಯ ಅಮೋಘ ಜೊತೆಯಾಟ ಅಭಿಮಾನಿಗಳಿಗೆ ಸುದೀರ್ಘ ಕಾಲ ನೆನಪಿನಲ್ಲುಳಿಯುವಂತೆ ಮಾಡಿದೆ.

ಈ ರೋಚಕ ಪಂದ್ಯದ ಬಗ್ಗೆ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪಂದ್ಯದಲ್ಲಿ ಒಂದು ಬಾರಿ ವಿರಾಟ್ ಕೊಹ್ಲಿಯ ಕಾರಣಕ್ಕೆ ತಾನು ಡ್ರೆಸ್ಸಿಂಗ್ ರೂಮ್ ಬಿಟ್ಟು ಆಚೆಗೆ ಓಡಿ ಹೇಗಿಬಿಟ್ಟಿದ್ದೆ ಎಂದಿದ್ದಾರೆ. ಹಾಗಾದರೆ ಅಶ್ವಿನ್ ಹೀಗೆ ಓಡಿ ಹೋಗಿದ್ದು ಯಾಕೆ? ಅಂಥಾದ್ಧೇನಾಯ್ತು? ಇಲ್ಲಿದೆ ಮಾಹಿತಿ ಮುಂದೆ ಓದಿ..
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಗ್ರ ಕ್ರಮಾಂಕದ ಮೂವರು ಆಟಗಾರರಾದ ಇಶಾನ್ ಕಿಶನ್, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಅವರನ್ನು ಕೇವಲ 2 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ಈ ಮೂವರು ಆಟಗಾರರು ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಅನುಭವಿ ಆಟಗಾರ ವಿರಾಟ್ ಕೊಹ್ಲಿ ನೀಡಿದ ಕ್ಯಾಚನ್ನು ಮಿಚೆಲ್ ಮಾರ್ಶ್ ಹಿಡಿದಿದ್ದರು ಅವರು ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆದರೆ ಅದೃಷ್ಟ ಭಾರತದ ಪರವಾಗಿತ್ತು. ಮಾರ್ಶ್ ಆ ಕ್ಯಾಚ್ ಕೈಚೆಲ್ಲಿದ್ದರು.
ಇದುವೇ ಆರ್ ಅಶ್ವಿನ್ ಡ್ರೆಸ್ಸಿಂಗ್ ರೂಮ್ ಬಿಟ್ಟು ಆಚೆ ಹೋಗಲು ಕಾರಣವಾಯಿತು ಎಂದು ಸ್ವತಃ ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ. ಜೊತೆಯಾಟ ಕಟ್ಟಲು ಆರಂಭಿಸಿದ್ದ ಕೊಹ್ಲಿ ಹಾಗೂ ರಾಹುಲ್ ಮೇಲೆ ಎಲ್ಲರ ನಿರೀಕ್ಷೆಗಳಿತ್ತು. ಆದರೆ ಹೇಜಲ್ವುಡ್ ಎಸೆತವನ್ನು ಪುಲ್ ಮಾಡುವ ಪ್ರಯತ್ನದಲ್ಲಿ ಕೊಹ್ಲಿ ವಿಫಲವಾದರು. ಆಕಾಶದೆತ್ತರಕ್ಕೆ ಚೆಂಡು ಚಿಮ್ಮಿತ್ತು. ಈ ಸಂದರ್ಭದಲ್ಲಿ ಆ ಕ್ಷಣವನ್ನು ಊಹಿಸಲು ಸಾಧ್ಯವಾಗದೆ ಆರ್ ಅಶ್ವಿನ್ ಓಡಿ ಹೋಗಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.
"ವಿರಾ್ ಕೊಹ್ಲಿ ಬಾರಿಸಿದ ಚೆಂಡು ಮೇಲಕ್ಕೆ ಹಾರುವುದನ್ನು ನೋಡಿ ನಾನು ಡ್ರೆಸ್ಸಿಂಗ್ರೂಮ್ನಿಂದ ಆಚೆಗೆ ನಾನು ಓಡಿ ಬಿಟ್ಟಿದ್ದೆ. ಅಕ್ಷರಶಃ ನಾನು ಹೊರಗೆ ಓಡಿದ್ದೆ. ನನಗೆ ಆ ಕ್ಷಣದಲ್ಲಿ ಏನು ಮಾಡಬೇಕು ಎಂದು ತಿಳಿದಿರಲಿಲ್ಲ. ಎಲ್ಲವೂ ಇಲ್ಲಿಗೆ ಮುಗಿಯಿತು ಎನ್ನುವಂಥಾ ಭಾವನೆ ನನ್ನಲ್ಲಿ ಬಂದಿತ್ತು. ಎಲ್ಲಾ ಭಾವನೆಗಳ ಮಿಶ್ರಣವದು" ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಆಶ್ವಿನ್.
"ದೊಡ್ಡ ಪಂದ್ಯಗಳಲ್ಲಿ ಇಂಥಾ ಸನ್ನಿವೇಶಗಳಲ್ಲಿ ಯಾವ ರೀತಿ ಎದುರಿಸಬೇಕು ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಆಸ್ಟ್ರೇಲಿಯಾದಂಥಾ ತಂಡವನ್ನು ಎದುರಿಸುವಾದ ಅದು ಸಣ್ಣ ಪಂದ್ಯ ಆಗಿರುವುದಿಲ್ಲ. 199 ರನ್ಗಳಿಗೆ ಕಟ್ಟಿ ಹಾಕಿದ್ದರೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ವಿರಾಟ್ ಕೊಹ್ಲಿ ಅಂಥಾ ಸಂದರ್ಭದಲ್ಲಿ ವಿಕೆಟ್ ಕಳೆದುಕೊಂಡಿದ್ದರೆ ಅದು ನಮಗೆ ದೊಡ್ಡ ಹೊಡೆತವಾಗಿರುತ್ತಿದ್ದು. ಕ್ಯಾಚ್ ಡ್ರಾಪ್ ಆದ ಬಳಿಕ ಪ್ರೇಕ್ಷಕರ ಕಿರುಚಾಟ ನೋಡಿ ನಾನು ಮತ್ತೆ ಡ್ರೆಸ್ಸಿಂಗ್ರೂಮ್ಗೆ ಓಡಿದ್ದೆ. ಇಡೀ ಪಂದ್ಯದಲ್ಲಿ ನಾನು ಒಂದೇ ಸ್ಥಳದಲ್ಲಿ ನಾನು ನಿಂತಿದ್ದೆ. ಹಾಗಾಗಿ ನನ್ನ ಪಾದಗಳು ಈಗಲೂ ನೋಯುತ್ತಿದೆ" ಎಂದಿದ್ದಾರೆ ಆರ್ ಅಶ್ವಿನ್.