ಬುಧವಾರ, ನವೆಂಬರ್ 15ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವು ಅಪಾಯಕಾರಿ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಮ್ಮೆ ಸವಾಲು ಎಸೆಯಲು ಸಿದ್ಧವಾಗಿದೆ.
ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಅತಿದೊಡ್ಡ ಅಚ್ಚರಿಯ ಪ್ಯಾಕೇಜ್ ಆಗಿ ಹೊರಹೊಮ್ಮಿದ್ದು, ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ರಚಿನ್ ರವೀಂದ್ರ. ಪ್ರಮುಖ ಪಂದ್ಯಗಳಲ್ಲಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯ ಹೊರತಾಗಿಯೂ ಕಿವೀಸ್ ತಂಡ ಸೆಮಿಫೈನಲ್ ತಲುಪಲು ರಚಿನ್ ಅವರ ಬ್ಯಾಟಿಂಗ್ ಕಾರಣ.
ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಹೆಸರಿನೊಂದಿಗೆ ವಿಶೇಷ ಸಂಪರ್ಕ ಹೊಂದಿರುವ ಬೆಂಗಳೂರು ಮೂಲದ ರಚಿನ್, ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದಾರೆ.

ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಹೆಚ್ಚು ಚರ್ಚೆಗೆ ಬಂದ ಹೆಸರು ರಚಿನ್ ರವೀಂದ್ರ. ವಿಶ್ವಕಪ್ ಚೊಚ್ಚಲ ಪಂದ್ಯದಲ್ಲಿಯೇ ರಚಿನ್ ರವೀಂದ್ರ ಶತಕ ಬಾರಿಸುವ ಮೂಲಕ 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡವನ್ನು ಸೋಲಿಸಲು ಕಾರಣರಾದರು.
ಇದರ ನಂತರ, ರಚಿನ್ ಹಿಂತಿರುಗಿ ನೋಡಲಿಲ್ಲ ಮತ್ತು ಅವರು ಈ ವಿಶ್ವಕಪ್ನಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಮಾತ್ರವಲ್ಲದೆ, 565 ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್ ನಂತರದ ಮೂರನೇ ಸ್ಥಾನದಲ್ಲಿದ್ದಾರೆ.
ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರ ಯಶಸ್ಸಿನ ನಂತರ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರಿನೊಂದಿಗಿನ ಅವರ ಸಂಪರ್ಕವೂ ಬೆಳಕಿಗೆ ಬಂದಿತು. ಆದರೆ, ದಿಗ್ಗಜ ಕ್ರಿಕೆಟಿಗರ ಪ್ರೇರಣೆಯಿಂದ ಹೆಸರು ಇಟ್ಟಿಲ್ಲವಾದರೂ, ಹೆಸರಿಟ್ಟ ನಂತರ, ಈ ವಿಚಾರ ಗೊತ್ತಾಯಿತು ಎಂದು ರಚಿನ್ ರವೀಂದ್ರ ತಂದೆ ಬಹಿರಂಗಪಡಿಸಿದ್ದಾರೆ.

ಇನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಕ್ರಿಕೆಟ್ ತಂಡ ಪ್ರಸಕ್ತ ವಿಶ್ವಕಪ್ನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ನ್ಯೂಜಿಲೆಂಡ್ ವಿರುದ್ಧ ಸೇರಿದಂತೆ, ಆಡಿದ ಒಂಬತ್ತು ಲೀಗ್ ಪಂದ್ಯಗಳನ್ನು ಗೆದ್ದು ಬೀಗಿದೆ.
ಕರ್ನಾಟಕದ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದು, ಕಿವೀಸ್ ಆಲ್ರೌಂಡರ್ ರಚಿನ್ ರವೀಂದ್ರ ಅವರನ್ನು ಲಘುವಾಗಿ ಪರಿಗಣಿಸಿಲ್ಲ. ಸಚಿನ್ ಮತ್ತು ರಾಹುಲ್ ಅವರನ್ನು ಒಟ್ಟಿಗೆ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಲು ರಚಿನ್ ಎದುರು ನೋಡುತ್ತಿದ್ದಾರೆ.