
ಅಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿರುವ ಅಜಿಂಕಗಯ ರಹಾನೆಗೆ ಸಾಕಷ್ಟ ಸಲಹೆಗಳು ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರಿಂದ ಬರುತ್ತಿದೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ಕೂಡ ನಾಯಕ ಅಜಿಂಕ್ಯ ರಹಾನೆಗೆ ಸಲಹೆಯೊಂದನ್ನು ನೀಡಿದ್ದಾರೆ.
ನಾಯಕನಾಗಿ ವಿರಾಟ್ ಕೊಹ್ಲಿ ಅಂಗಳದಲ್ಲಿ ಆಕ್ರಮಣಕಾರಿ ಮನೋಭಾವ ಹೊಂದಿದ ಆಟಗಾರನಾಗಿದ್ದರೆ ಅಜಿಂಕ್ಯ ರಹಾನೆ ಮಾತ್ರ ಶಾಂತಚಿತ್ರದಿಂದ ವರ್ತಿಸುವ ಆಟಗಾರ. ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸುವ ಕಾರಣದಿಂದಾಗಿ ಅಜಿಂಕ್ಯ ರಹಾನೆ ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಆತ ತನ್ನದೇ ಆದ ರೀತಿಯಲ್ಲಿ ಆಕ್ರಮಣಕಾರಿತನವನ್ನು ವ್ಯಕ್ತಪಡಿಸುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.
"ನೀವು ನಿಮ್ಮ ವ್ಯಕ್ತಿತ್ವವನ್ನು ರಾತ್ರೋರಾತ್ರಿ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಅಗತ್ಯವೇ ಇಲ್ಲ. ಭಿನ್ನ ನಾಯಕರು ಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮದೇ ರೀತಿಯಲ್ಲಿ ತಂಡವನ್ನು ಮುನ್ನಡೆಸುತ್ತಾರೆ" ಎಂದು ಗೌತಮ್ ಗಂಭೀರ್ ವಿವರಿಸಿದ್ದಾರೆ.
"ಅಜಿಂಕ್ಯ ರಹಾನೆ ವಿರಾಟ್ ಕೊಹ್ಲಿ ಆಗಲು ಸಾಧ್ಯವಿಲ್ಲ. ವಿರಾಟ್ ಕೊಹ್ಲಿ ಎಂಸ್ ಧೋನಿಯಂತಾಗಲು ಸಾಧ್ಯವಿಲ್ಲ. ಎಂಎಸ್ ಧೋನಿ ಯಾವತ್ತಿಗೂ ಸೌರವ್ ಗಂಗೂಲಿಯಾಗಲು ಸಾಧ್ಯವಿಲ್ಲ. ಈ ಎಲ್ಲಾ ನಾಯಕರೂ ಯಶಸ್ವೀ ನಾಯಕರೆನಿಸಿದ್ದಾರೆ" ಎಂದು ಸ್ಪೋರ್ಟ್ಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಗಂಭೀರ್ ಹೇಳಿದ್ದಾರೆ.
"ಅಜಿಂಕ್ಯ ರಹಾನೆಯಿಂದ ನಾನು ಬಯಸುವ ಬದಲಾವಣೆಯೆಂದರೆ ಅವರ ಕ್ರಮಾಂಕದಲ್ಲಿ ಏರಿಸಿಕೊಳ್ಳುವುದು. ರಹಾನೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದನ್ನು ನೋಡಲು ನಾನು ಬಯಸುತ್ತೇನೆ. ಈ ಮೂಲಕ ಅವರು ತಾನು ಮುಂದಿನಿಂದ ನಿಂತು ತಂಡವನ್ನು ಮುನ್ನಡೆಸುತ್ತೇನೆ ಎಂಬ ಸಂದೇಶವನ್ನು ನೀಡಬಹುದು" ಎಂದು ಗೌತಮ್ ಗಂಭೀರ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರಹಾನೆಗೆ ಸಲಹೆಯನ್ನು ನೀಡಿದ್ದಾರೆ.