ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಸೋಲಿನ ಸರಪಳಿಯನ್ನು ಕೊನೆಗೊಳಿಸಿ ತವರಿನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಬೇಕು ಎಂದು ಪ್ಲ್ಯಾನ್ನೊಂದಿಗೆ ಕಣಕ್ಕೆ ಇಳಿದಿತ್ತು. ಆ ಯೋಜನೆ ಕೈ ಕೊಟ್ಟಿದೆ. ಗುಜರಾತ್ ಟೈಟಾನ್ಸ್ ತಂಡದ ಸಂಘಟಿತ ಆಟಕ್ಕೆ ಅಂಜಿಕ್ಯ ರಹಾನೆ ಪಡೆ ತಲೆ ಬಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಶುಭ್ಮನ್ ಪಡೆ ಪ್ಲೇ ಆಫ್ಗೆ ತುಂಬ ಹತ್ತಿರದಲ್ಲಿ ನಿಂತಿದೆ. 18ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಕೆಕೆಆರ್ ಸೋಲಿಗೆ ಏನು ಕಾರಣ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.
ಕೆಕೆಆರ್ ಟಾಸ್ ಗೆಲ್ಲುತ್ತಿದ್ದಂತೆ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಆದರೆ ಈ ಅವಧಿಯಲ್ಲಿ ಅವರ ಬೌಲರ್ಗಳು ಕರಾರುವಕ್ ದಾಳಿ ನಡೆಸಿ ಪವರ್ ಪ್ಲೇನಲ್ಲಿ ಅಬ್ಬರಿಸುವಲ್ಲಿ ವಿಫಲರಾದರು. ಗುಜರಾತ್ ಟೈಟನ್ಸ್ ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಆಗಲೇ ಕೆಕೆಆರ್ ಪಾಳಯದಲ್ಲಿ ಚಿಂತೆಯ ಗೆರೆಗಳು ಮೂಡಿದ್ದವು. ಆದರೆ ಈ ಜೊತೆಯಾಟಕ್ಕೆ ಬ್ರೇಕ್ ಹಾಕಲು ಮಾತ್ರ ಆಗಲೇ ಇಲ್ಲ.

ಸುಮಾರು 12 ಓವರ್ಗಳ ವರೆಗೆ ಚಿಂತೆಯ ರೇಖೆಗಳಿಂದ ತುಂಬಿದ್ದ ಕೆಕೆಆರ್ ಆಟಗಾರರ ಮುಖದಲ್ಲಿ ಆಂಡ್ರೆ ರಸೆಲ್ ಭರವಸೆಯ ಬೆಳಕು ಮೂಡಿಸಿದರು. ಇವರು ಇನ್ಫಾರ್ಮ್ ಬ್ಯಾಟರ್ ಸಾಯಿ ಸುದರ್ಶನ್ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಸಾಯಿ ಸುದರ್ಶನ್ 36 ಎಸೆತಗಳಲ್ಲಿ 52 ರನ್ ಬಾರಿಸಿ ಔಟ್ ಅದರು. ಇವರು ಔಟ್ ಆದ ಬಳಿಕವೂ ಗುಜರಾತ್ ರನ್ ವೇಗಕ್ಕೆ ಅಂಕುಶ ಹಾಕುವಲ್ಲಿ ಕೆಕೆಆರ್ ವಿಫಲವಾಯಿತು. ಎರಡನೇ ವಿಕೆಟ್ಗೂ ಶುಭಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಜೋಡಿ ಅರ್ಧಶತಕ ಜೊತೆಯಾಟ ನೀಡಿತು.
ಶುಭಮನ್ ಗಿಲ್ 10 ಬೌಂಡರಿ, 3 ಸಿಕ್ಸರ್ ನೆರವಿನಿಂದ 90 ರನ್ ಬಾರಿಸಿದ್ದಾಗ ವೈಭವ್ ಆರೋರ್ ಎಸೆತದಲ್ಲಿ ರಿಂಕು ಸಿಂಗ್ಗೆ ಕ್ಯಾಚ್ ನೀಡಿದರು. ಜೋಸ್ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇದುವೇ ಟರ್ನಿಂಗ್ ಪಾಯಿಂಟ್ ಹಾಗೆ ಭಾಸವಾಯಿತು. ಆದರೆ ಅಸಲಿಗೆ ಆಗಿದ್ದೇ ಬೇರೆ.
ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ತಂಡದ ಬ್ಯಾಟರ್ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ರಹಮುತ್ತಲಾ ಗುರ್ಬಾಜ್ ಹಾಗೂ ಸುನಿಲ್ ನರೈನ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪವರ್ ಪ್ಲೇ ಅಂತ್ಯವಾದಾಗ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 45 ರನ್ ಸೇರಿಸಿತ್ತು. ಆದರೆ 7 ರಿಂದ 14 ಓವರ್ಗಳ ವರೆಗೆ ಅಗತ್ಯ ರನ್ ಕಲೆ ಹಾಕುವಲ್ಲಿ ವಿಫಲವಾಯಿತು. ಅಲ್ಲದೆ ಈ ಅವಧಿಯಲ್ಲಿ 63 ರನ್ ಸಿಡಿಸಿ 2 ವಿಕೆಟ್ ಕಳೆದುಕೊಂಡಿತು.
ಆದರೆ ನಿಜಕ್ಕೂ ಪಂದ್ಯಕ್ಕೆ ತಿರುವ ಸಿಕ್ಕಿದ್ದು ಅಜಿಂಕ್ಯ ರಹಾನೆ ಹಾಗೂ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಮಾಡುವಾಗ, ಈ ಜೋಡಿ 36 ಎಸೆತಗಳಲ್ಲಿ 41 ರನ್ ಸೇರಿಸಿ ತಂಡಕ್ಕೆ ಇನ್ನು ಒತ್ತಡಕ್ಕೆ ಸಿಲಿಕಿಸಿತು. ಅಜಿಂಕ್ಯ ಅರ್ಧಶತಕ ಬಾರಿಸಿದ್ರೂ ಸಹ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ವಿಫಲರಾದರು.