
ಬೆಂಗಳೂರು, ಸೆಪ್ಟೆಂಬರ್ 21: "ಭಾರತೀಯ ಕ್ರಿಕೆಟ್ ನ ಇಬ್ಬರು 'ದಿಗ್ಗಜರು' ಭೇಟಿಯಾದಾಗ..." ಎಂಬ ಕ್ಯಾಪ್ಷನ್ ನೊಂದಿಗೆ ಬಿಸಿಸಿಐ ಟ್ವೀಟ್ ಮಾಡಿದ್ದ ಚಿತ್ರವೊಂದು ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಒದಗಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯ ಮೂರನೇ ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ತನ್ನಿಮಿತ್ತ ಭಾರತೀಯ ಕ್ರಿಕೆಟ್ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಭ್ಯಾಸ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರೂ
ಟೀಂ ಇಂಡಿಯಾ ಮಾಜಿ ನಾಯಕ 'ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಕೋಹ್ಲಿ ಟೀಂ ನ ಅಭ್ಯಾದ ವೇಳೆ ಪಾಲ್ಗೊಂಡು, ಆಟಗಾರರಿಗೆ ಕೆಲವು ಟಿಪ್ಸ್ ಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೋಚ್ ರವಿ ಶಾಸ್ತ್ರಿ ಅವರನ್ನೂ ದ್ರಾವಿಡ್ ಭೇಟಿಯಾದರು.
ಈ ಇಬ್ಬರು ಮೈದಾನದಲ್ಲಿ ಕೈಕುಲುತ್ತಿರುವ ಚಿತ್ರವನ್ನು ಬಿಸಿಸಿಐ ಟ್ವೀಟ್ ಮಾಡಿ, "When two greats of Indian Cricket meet" ಎಂಬ ಶೀರ್ಷಿಕೆ ನೀಡಿತ್ತು. ಆದರೆ ಈ ಕ್ಯಾಪ್ಷನ್ ರಾಹುಲ್ ದ್ರಾವಿಡ್ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಇಬ್ಬರು 'ದಿಗ್ಗಜರು' ಎಂದು ಹಾಕಿದ್ದೀರಿ. ಒಬ್ಬರು ದ್ರಾವಿಡ್ ಸರಿ. ಇನ್ನೊಬ್ಬರು ಯಾರು? ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, "ಇಬ್ಬರು ದಿಗ್ಗಜರು ಎಂದರೆ, ರಾಹುಲ್ ಮತ್ತು ದ್ರಾವಿಡ್" ಎಂದಿದ್ದಾರೆ.
"ದ್ರಾವಿಡ್ ಮಾತ್ರವೇ ನಮ್ಮ ಹಿರೋ. ಅವರನ್ನು ಮತ್ತೊಬ್ಬರ ಜೊತೆ ಹೋಲಿಸಬೇಡಿ" ಎಂದು ವ್ಯಕ್ತಿಯೊಬ್ಬರು ಕೆಂಡ ಕಾರಿದ್ದಾರೆ. "ಒಬ್ಬರು ಗ್ರೇಟ್, ಇನ್ನೊಬ್ಬರು ರಿಗ್ರೆಟ್" ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಟ್ರೋಲಿಗರು ರವಿಶಾಸ್ತ್ರಿ ಅವರ ಮೇಲಿನ ತಮ್ಮ ಮುನಿಸನ್ನು ಹೊರಹಾಕಿದ್ದಾರೆ. ಜೊತೆಗೆ ಈ ಇಬ್ಬರು ಕ್ರಿಕೆಟಿಗರನ್ನೂ ಯಾವ ಕಾರಣಕ್ಕೂ ಹೋಲಿಕೆ ಮಾಡಬೇಡಿ ಎಂದ ಸಂದೇಶವನ್ನೂ ಬಿಸಿಸಿಐ ಗೆ ನೀಡಿದ್ದಾರೆ.
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ 3 ಟಿ20, 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಭಾರತ ಸದ್ಯ ಸರಣಿಯಲ್ಲಿ ಮುನ್ನಡೆಯಲ್ಲಿದೆ.