ಕೊಹ್ಲಿ-ಶಾಸ್ತ್ರಿ ಕಡೆಗಣಿಸಿದ್ದ ಕುಂಬ್ಳೆಯ ಮತ್ತೊಂದು ನೀತಿ ಜಾರಿಗೆ ತಂದ ದ್ರಾವಿಡ್; ಆಟಗಾರರಿಗೆ ಸಂಕಷ್ಟ!

ಇತ್ತೀಚಿಗಷ್ಟೆ ಮುಕ್ತಾಯಗೊಂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಟೂರ್ನಿಯಲ್ಲಿ ಟ್ರೋಫಿ ಗೆಲ್ಲದೇ ಹೊರಬಿದ್ದಿದ್ದರ ಸೇಡನ್ನು ತೀರಿಸಿಕೊಂಡಿದೆ. ಅದರಲ್ಲಿಯೂ ಭಾರತದ ಲೆಜೆಂಡರಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ತರಬೇತುದಾರನಾಗಿ ಆಯ್ಕೆಯಾದ ನಂತರ ನಡೆದ ಮೊದಲನೆ ಟಿ ಟ್ವೆಂಟಿ ಮತ್ತು ಟೆಸ್ಟ್ ಸರಣಿಗಳು ಇವಾಗಿದ್ದು ದ್ರಾವಿಡ್ ಕೋಚ್ ಆಗಿ ಗೆಲುವಿನ ಶುಭಾರಂಭ ಮಾಡಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಈ ಸರಣಿಗಳ ಮೂಲಕ ಟೀಮ್ ಇಂಡಿಯಾದ ತರಬೇತುದಾರನಾಗಿ ಯಶಸ್ಸಿನೊಂದಿಗೆ ತನ್ನ ಕೆಲಸ ಆರಂಭಿಸಿದ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆದಾಗಿನಿಂದ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸತೊಡಗಿದೆ. ಮುಂಚೆ ಭಾರತ ಎ ಮತ್ತು ಭಾರತ ಅಂಡರ್ ೧೯ ತಂಡಗಳಿಗೆ ಕೋಚ್ ಆಗಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದ ಅನುಭವವಿರುವ ದ್ರಾವಿಡ್ ಸದ್ಯ ಟೀಮ್ ಇಂಡಿಯಾದಲ್ಲಿಯೂ ಶಿಸ್ತಿನ ಪಾಠ ಶುರು ಮಾಡಿದ್ದಾರೆ. ಮೊದಲಿಗೆ ನೂತನವಾಗಿ ತಂಡ ಸೇರುವ ಯುವ ಆಟಗಾರರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರ ಕೈನಿಂದ ಕ್ಯಾಪ್ ಕೊಡಿಸುವ ಸಂಪ್ರದಾಯವನ್ನು ಜಾರಿಗೆ ತರುವ ಮೂಲಕ ರಾಹುಲ್ ದ್ರಾವಿಡ್ ಈ ಹಿಂದೆ ಭಾರತ ತಂಡದ ಕೋಚ್ ಆಗಿದ್ದ ಮತ್ತೋರ್ವ ಭಾರತ ತಂಡದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೋಚಿಂಗ್ ಸಮಯದಲ್ಲಿದ್ದ ಸಂಪ್ರದಾಯವನ್ನು ಮತ್ತೆ ಜಾರಿಗೆ ತಂದಿದ್ದರು.
ಇದೀಗ ಅಂತಹದ್ದೇ ಮತ್ತೊಂದು ಸಂಪ್ರದಾಯವನ್ನು ರಾಹುಲ್ ದ್ರಾವಿಡ್ ಜಾರಿಗೆ ತಂದಿದ್ದು, ಫಿಟ್ನೆಸ್ ಕಳೆದುಕೊಂಡು ತಂಡದಿಂದ ಹೊರಗುಳಿಯಲಿರುವ ಆಟಗಾರರಿಗೆ ಇದು ತಲೆನೋವಾಗಿ ಪರಿಣಮಿಸಲಿದೆ. ಅಷ್ಟಕ್ಕೂ ರಾಹುಲ್ ದ್ರಾವಿಡ್ ಜಾರಿಗೆ ತಂದಿರುವ ಕುಂಬ್ಳೆ ಕಾಲದ ಆ ಮತ್ತೊಂದು ಸಂಪ್ರದಾಯವಾದರೂ ಯಾವುದು ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.

ಗಾಯಗೊಂಡು ಚೇತರಿಸಿಕೊಂಡವರು ದೇಸಿ ಕ್ರಿಕೆಟ್ ಆಡಲೇಬೇಕು
ಸದ್ಯ ಭಾರತ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿರುವ ಯಾವುದೇ ಆಟಗಾರನಾದರೂ ಗಾಯದ ಸಮಸ್ಯೆಗೆ ಒಳಗಾಗಿ, ಚಿಕಿತ್ಸೆ ಪಡೆದುಕೊಂಡು ಮರಳಿ ತಂಡ ಸೇರಬೇಕೆಂದರೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಲೇಬೇಕಾಗಿದೆ ಎಂಬ ನೀತಿಯನ್ನು ರಾಹುಲ್ ದ್ರಾವಿಡ್ ಪುನಃ ಜಾರಿಗೆ ತಂದಿದ್ದಾರೆ. ಹೀಗಾಗಿ ಗಾಯಕ್ಕೊಳಗಾಗುವ ಆಟಗಾರರು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿ ತಾವು ಫಿಟ್ ಆಗಿರುವುದನ್ನು ಸಾಬೀತುಪಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ರವಿಶಾಸ್ತ್ರಿ ಸಮಯದಲ್ಲಿ ಇರಲಿಲ್ಲ ಈ ಸಂಪ್ರದಾಯಗಳು
ಗಾಯದ ಸಮಸ್ಯೆಗೆ ಒಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರು ಕಡ್ಡಾಯವಾಗಿ ದೇಸಿ ಕ್ರಿಕೆಟ್ ಆಡಲೇಬೇಕೆಂಬ ಸಂಪ್ರದಾಯ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಜಾರಿಯಲ್ಲಿತ್ತು. ಆದರೆ ಅನಿಲ್ ಕುಂಬ್ಳೆ ನಂತರ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಈ ಸಂಪ್ರದಾಯಗಳಿಗೆ ಸೊಪ್ಪು ಹಾಕಿರಲಿಲ್ಲ. ಗಾಯದ ಸಮಸ್ಯೆಗೆ ಒಳಗಾದ ಆಟಗಾರರು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಕು ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಅಷ್ಟೇ ಅಲ್ಲದೇ ತಂಡ ಸೇರುವ ನೂತನ ಆಟಗಾರರಿಗೆ ರವಿಶಾಸ್ತ್ರಿ - ಕೊಹ್ಲಿ ಸಮಯದಲ್ಲಿ ಭಾರತದ ಮಾಜಿ ಕ್ರಿಕೆಟಿಗರಿಂದ ಕ್ಯಾಪ್ ಕೊಡಿಸುವ ಸಂಪ್ರದಾಯಕ್ಕೂ ಬ್ರೇಕ್ ಹಾಕಿ ಪ್ರಸ್ತುತ ತಂಡದಲ್ಲಿರುವ ಆಟಗಾರರ ಕೈನಿಂದಲೇ ಯುವ ಆಟಗಾರರಿಗೆ ಕ್ಯಾಪ್ ಕೊಡಿಸಲಾಗುತ್ತಿತ್ತು. ಆದರೆ ಈಗ ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಇದ್ದ ಈ ಎರಡೂ ಸಂಪ್ರದಾಯಗಳನ್ನೂ ಮರಳಿ ತರುವುದರ ಮೂಲಕ ಭಾರೀ ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ.

ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರಿಗೆ ಸಂಕಷ್ಟ
ರಾಹುಲ್ ದ್ರಾವಿಡ್ ಜಾರಿಗೆ ತಂದಿರುವ ಈ ಸಂಪ್ರದಾಯದಿಂದ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿಯುವ ಆಟಗಾರರಿಗೆ ಸಂಕಷ್ಟ ಎದುರಾಗುವುದು ಕಟ್ಟಿಟ್ಟ ಬುತ್ತಿ. ಹೌದು, ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಗೊಳಗಾಗಿ ನೇರವಾಗಿ ತಂಡ ಸೇರುತ್ತಿದ್ದ ಆಟಗಾರರು ಈಗ ದೇಸಿ ಕ್ರಿಕೆಟ್ ಆಡಿ ತಾವು ಫಿಟ್ ಆಗಿರುವುದನ್ನು ನಿರೂಪಿಸಿಕೊಂಡರಷ್ಟೇ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications