4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

ಟೀಮ್ ಇಂಡಿಯಾದಲ್ಲಿ ಸದ್ಯ ಭಾರೀ ಚರ್ಚೆಗೀಡಾಗಿರುವ ಮತ್ತು ಟೀಕೆಗಳಿಗೆ ಒಳಗಾಗುತ್ತಿರುವ ವಿಷಯವೆಂದರೆ ಅದು ನಾಯಕತ್ವ. ಹೌದು, ಕಳೆದ ಬಾರಿ ಯುಎಇಯಲ್ಲಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಸಮಯದಿಂದ ಇಲ್ಲಿಯವರೆಗೂ ಸಹ ಭಾರತ ಕ್ರಿಕೆಟ್ನಲ್ಲಿ ಅತಿ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿರುವುದು ಇದೇ ನಾಯಕತ್ವ. ಮೊದಲಿಗೆ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ ಕೇವಲ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದರು.
ಹೀಗೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲಿಗೆ ನಡೆದ ಟೆಸ್ಟ್ ಸರಣಿಯ ಪ್ರಥಮ ಪಂದ್ಯದಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದರು ಹಾಗೂ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಆದರೆ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದರು. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದರು ಹಾಗೂ ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಂಡಿತು. ಹೀಗೆ ಕೆಎಲ್ ರಾಹುಲ್ ತಾವು ನಾಯಕನಾಗಿ ಮುನ್ನಡೆಸಿದ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡರು. ನಂತರ ನಡೆದ ತೃತೀಯ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮರಳಿ ತಂಡ ಸೇರಿದರು ಆದರೆ, ಈ ಪಂದ್ಯದಲ್ಲಿಯೂ ಕೂಡಾ ಟೀಮ್ ಇಂಡಿಯಾ ಸೋಲನ್ನು ಅನುಭವಿಸಿತು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಪಂದ್ಯಗಳ ಅಂತರದಲ್ಲಿ ಟೀಮ್ ಇಂಡಿಯಾ ಸೋತಿತು.
ಈ ಮೂಲಕ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸರಣಿ ಸೋಲನ್ನು ಅನುಭವಿಸಿತು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಯಿತು. ಆದರೆ ನಾಯಕ ರೋಹಿತ್ ಶರ್ಮಾ ಈ ಸರಣಿಗೆ ಅಲಭ್ಯರಾಗಿದ್ದ ಕಾರಣ ಕೆಎಲ್ ರಾಹುಲ್ ಸರಣಿ ಪೂರ್ತಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದರು. ದುರಾದೃಷ್ಟವಶಾತ್ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ 3 ಪಂದ್ಯಗಳನ್ನು ಕೂಡ ಸೋಲುವುದರ ಮೂಲಕ ಏಕದಿನ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಕೆಎಲ್ ರಾಹುಲ್ ನಾಯಕನಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 4 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಕುರಿತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ಮಾತನಾಡಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೆಎಲ್ ರಾಹುಲ್ ಬಗ್ಗೆ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಇದು ಆರಂಭವಷ್ಟೇ ಅವಕಾಶ ಸಿಕ್ಕರೆ ಸರಿಯಾಗುತ್ತೆ
ನಾಯಕನಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಕುರಿತು ಮಾತನಾಡಿರುವ ರಾಹುಲ್ ದ್ರಾವಿಡ್ ಇದು ಆತನ ನಾಯಕತ್ವದ ಆರಂಭದ ದಿನಗಳಷ್ಟೇ ಹಾಗೂ ಆತ ಅದನ್ನು ಉತ್ತಮವಾಗಿ ನಿರ್ವಹಿಸಿದ್ದಾನೆ ಎಂದು ರಾಹುಲ್ ದ್ರಾವಿಡ್ ಕೆಎಲ್ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ. ಹಾಗೂ ಮತ್ತಷ್ಟು ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಅವರಿಗೆ ನೀಡಿದರೆ ಆತ ಓರ್ವ ಉತ್ತಮ ನಾಯಕನಾಗಲಿದ್ದಾನೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿದರು ಎಂದ ರಾಹುಲ್
ಇನ್ನೂ ಮುಂದುವರಿದು ಮಾತನಾಡಿರುವ ರಾಹುಲ್ ದ್ರಾವಿಡ್ ನಾಯಕ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಜವಾಬ್ದಾರಿಯನ್ನು ನಿರ್ವಹಿಸಿದರು ಎಂದಿದ್ದಾರೆ. ಹಾಗೂ ಕೆಟ್ಟ ಫಲಿತಾಂಶದಲ್ಲಿ ನಾಯಕನಾಗಿ ಪ್ರಶ್ನೆಗಳನ್ನು ಎದುರಿಸುವುದು ಸುಲಭದ ಮಾತಲ್ಲ ಎಂದು ದ್ರಾವಿಡ್ ಹೇಳಿದ್ದಾರೆ.

ಈ ಸರಣಿಯಿಂದ ಬುದ್ಧಿ ಕಲಿಯಬೇಕಿದೆ
ಹಾಗೂ ಅಂತಿಮವಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ಮಾತನಾಡಿರುವ ರಾಹುಲ್ ದ್ರಾವಿಡ್ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಟೀಮ್ ಇಂಡಿಯಾ ಸೋತಿರುವುದು ಕಣ್ಣನ್ನು ತೆರೆಸಿದೆ ಎಂದಿದ್ದಾರೆ. ಈ ಸರಣಿಯ ಎಲ್ಲಾ ತಪ್ಪುಗಳನ್ನು ಮುಂದಿನ ಸರಣಿಗಳಲ್ಲಿ ತಿದ್ದುಕೊಂಡು ಟೀಮ್ ಇಂಡಿಯಾ ಕಮ್ ಬ್ಯಾಕ್ ಮಾಡಲಿದೆ ಎಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications