ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಅಂತರದ ಆಘಾತಕಾರಿ ಸೋಲು ಅನುಭವಿಸುವ ಮೂಲಕ ವಿಶ್ವಕಪ್ ಗೆಲುವಿನ ಕನಸನ್ನು ಭಗ್ನಗೊಳಿಸಿಕೊಂಡಿದೆ. ಈ ಸೋಲಿನ ಮೂಲಕ ಭಾರತೀಯ ಕ್ರಿಕೆಟ್ನ ಮತ್ತೊಂದು ಯುಗ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ಗೆ ಆ ವಿಶ್ವಕಪ್ ಫೈನಲ್ ಪಂದ್ಯವೇ ಅಂತಿಮವಾಗುವ ಸಾಧ್ಯತೆಯಿದೆ.
ಬಿಸಿಸಿಐ ಮೂಲಗಳ ಮಾಹಿತಿಯ ಪ್ರಕಾರ ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಎರಡು ವರ್ಷಗಳ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಮುಂದಿವರಿಯದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನು ಸ್ವತಃ ರಾಹುಲ್ ದ್ರಾವಿಡ್ ಅವರು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ದ್ರಾವಿಡ್ ಮನವೊಲಿಸುವ ಪ್ರಯತ್ನ ನಡೆಯುತ್ತಾ?
ಏಕದಿನ ವಿಶ್ವಕಪ್ ಮುಕ್ತಾಯವಾಗಿದೆ ನಿಜ. ಆದರೆ ಇನ್ನೇನು ಆರು ತಿಂಗಳಿನಲ್ಲಿ ಮತ್ತೊಂದು ವಿಶ್ವಕಪ್ ಕೂಡ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿ ಮುಂದಿನ ಜೂನ್ ತಿಂಗಳಿನಲ್ಲಿ ಆರಂಭವಾಗಲಿದೆ. ಈ ಚುಟುಕು ವಿಶ್ವಕಪ್ನಲ್ಲಿ ಭಾರತ ತಂಡ ಯುವ ಪಡೆಯೊಂದಿಗೆ ಕಣಕ್ಕಿಳಿಯುವ ಲೆಕ್ಕಾಚಾರದಲ್ಲಿದೆ. ಆ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ಆರಂಬವಾಗಿದೆ. ಆದರೆ ಇಂಥಾ ಟೂರ್ನಿಗೆ ಯುವ ಆಟಗಾರರನ್ನು ಸಜ್ಜುಗೊಳಿಸಲು ದ್ರಾವಿಡ್ ಅವರಿಗಿಂತ ಮತ್ತೊಬ್ಬ ಸಮರ್ಥರಿಲ್ಲ ಎನ್ನುವುದು ಕ್ರಿಕೆಟ್ ಪ್ರೇಮಿಗಳ ಹಾಗೂ ವಿಶ್ಲೇಷಕರ ಅಭಿಪ್ರಾಯ.
ಹೀಗಾಗಿ ದ್ರಾವಿಡ್ ಅವರನ್ನು ಚುಟುಕು ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಮುಂದುವರಿಸುವಂತೆ ಮನವೊಲಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಆ ನಿಟ್ಟಿನಲ್ಲಿ ಬಿಸಿಸಿಐ ಎಷ್ಟರ ಮಟ್ಟಿಗೆ ಕಾರ್ಯನಿರತವಾಗಿದೆ, ಅಥವಾ ಅದನ್ನು ದ್ರಾವಿಡ್ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿದ್ದಾರಾ ಎನ್ನುವುದು ಕೂಡ ಸದ್ಯಕ್ಕೆ ಪ್ರಶ್ನೆಯಾಗಿದೆ.
ವಿವಿಎಸ್ ಲಕ್ಷ್ಮಣ್ ಮುಂದಿನ ಕೋಚ್?
ರಾಹುಲ್ ದ್ರಾವಿಡ್ ಭಾರತದ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಒಪ್ಪದಿದ್ದರೆ ಅವರ ಆಪ್ತ ಸ್ನೇಹಿತರೇ ಆದ ವಿವಿಎಸ್ ಲಕ್ಷ್ಮಣ್ ಆ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗುತ್ತಿದೆ. ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥರಾಗಿದ್ದು ಡ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಈಗಾಗಲೇ ಕೆಲ ಸರಣಿಗಳಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಜಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿಯೂ ಲಕ್ಷ್ಮಣ್ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ 2021ರಲ್ಲಿ ಹೆಡ್ ಕೋಚ್ ಆಗಿ ಕರ್ತವ್ಯವನ್ನು ಆರಂಭಿಸಿದರು. ಎರಡು ವರ್ಷಗಳ ಅವರ ಒಪ್ಪಂದ ಈಗ ಈ ಬಾರಿಯ ವಿಶ್ವಕಪ್ ಟೂರ್ನಿಯೊಂದಿಗೆ ಅಂತ್ಯವಾಗಿದೆ.