ಲಂಡನ್ನ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಇದುವರೆಗಿನ ಕಳಪೆ ಪ್ರದರ್ಶನಕ್ಕಾಗಿ ಪಾಕಿಸ್ತಾನ ತಂಡದ ಮಾಜಿ ಆಟಗಾರ ಬಸಿತ್ ಅಲಿ ಅವರು ಭಾರತ ತಂಡ ಪ್ರದರ್ಶನ ಬಗ್ಗೆ ಕಟುವಾದ ದಾಳಿ ನಡೆಸಿದ್ದಾರೆ.
ಐಸಿಸಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ನಲ್ಲಿ ಕಳಪೆಯಾಗಿ ಕಂಡಿತು. ಬಳಿಕ ಬ್ಯಾಟಿಂಗ್ ಮಾಡುವಾಗ ಅಗ್ರ ಕ್ರಮಾಂಕವು ಮತ್ತೊಮ್ಮೆ ವಿಫಲವಾಯಿತು. ಇನ್ನು ಆಸ್ಟ್ರೇಲಿಯಾ ತಂಡ 3ನೇ ದಿನ ಮುಕ್ತಾಯವಾದಾಗ 296 ರನ್ಗಳ ಮುನ್ನಡೆಯಲ್ಲಿದೆ. ಉಳಿದ ಎರಡು ದಿನಗಳಲ್ಲಿ ಯಾವುದೇ ರೀತಿಯ ಪುನರಾಗಮನ ಮಾಡುವುದು ಟೀಮ್ ಇಂಡಿಯಾಗೆ ತುಂಬಾ ಕಷ್ಟಕರವಾಗಿದೆ.

ಇದೇ ವೇಳೆ ಓವಲ್ನಲ್ಲಿ ಇದುವರೆಗಿನ ಭಾರತ ತಂಡದ ಪ್ರದರ್ಶನವನ್ನು ವಿಶ್ಲೇಷಿಸಿದ ಪಾಕಿಸ್ತಾನ ಮಾಜಿ ಆಟಗಾರ ಬಸಿತ್ ಅಲಿ, "ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಹೊರತುಪಡಿಸಿ, ಇತರ ಎಲ್ಲ ಆಟಗಾರರು ದಣಿದಂತೆ ಕಂಡುಬಂತು".
ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ರೋಹಿತ್ ಶರ್ಮಾ ಅವರ ನಿರ್ಧಾರವನ್ನೇ ಟೀಕಿಸಿದ ಬಸಿತ್ ಅಲಿ, ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ಭಾರತಕ್ಕೆ ಈಗ ಪವಾಡ ಮಾಡಬೇಕು ಎಂದು ಹೇಳಿದರು.
"ಟಾಸ್ ಗೆದ್ದ ನಂತರ ಬೌಲ್ ಮಾಡಲು ಆಯ್ಕೆ ಮಾಡಿದ ಕ್ಷಣದಲ್ಲಿ ಭಾರತ ತಂಡ ಪಂದ್ಯವನ್ನು ಕಳೆದುಕೊಂಡಿತು. ಮೊದಲ ಎರಡು ಗಂಟೆಗಳ ನಂತರ ಭೋಜನ ವಿರಾಮದ ಹೊತ್ತಿಗೆ, ಭಾರತೀಯ ಬೌಲರ್ಗಳು ಪಂದ್ಯವನ್ನು ಗೆದ್ದಂತೆ ಸಂತೋಷಪಟ್ಟರು. ಭಾರತಕ್ಕೆ ಗೆಲುವು ದಕ್ಕಬೇಕೆಂದರೆ, ನಾಲ್ಕನೇ ಇನ್ನಿಂಗ್ಸ್ನಲ್ಲಿ ಪವಾಡವೇ ನಡೆಯಬೇಕು," ಎಂದು ಬಸಿತ್ ಅಲಿ ತಿಳಿಸಿದರು.

ಭಾರತ ಫೀಲ್ಡಿಂಗ್ ಮಾಡಿದ 120 ಓವರ್ಗಳಲ್ಲಿ ಕೇವಲ 2-3 ಆಟಗಾರರು ಫಿಟ್ ಆಗಿರುವುದನ್ನು ನಾನು ನೋಡಿದೆ. ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಫಿಟ್ ಆಗಿ ಕಂಡರೆ, ಉಳಿದವರು ದಣಿದಂತೆ ಕಾಣುತ್ತಿದ್ದರು,'' ಎಂದು ಪಾಕಿಸ್ತಾನದ ಮಾಜಿ ಬ್ಯಾಟರ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಟೀಕಿಸಿದ್ದಾರೆ.
ಇದೇ ವೇಳೆ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು 52 ವರ್ಷದ ಬಸಿತ್ ಅಲಿ ಕಟುವಾಗಿ ಟೀಕಿಸಿದರು. ದ್ರಾವಿಡ್ ಅವರನ್ನು ಕಳಪೆ ತರಬೇತುದಾರ ಎಂದು ರೇಟ್ ನೀಡಿದ್ದಾರೆ.
ಇತ್ತೀಚೆಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಯಾವ ರೀತಿಯ ಪಿಚ್ ಸಿದ್ಧಪಡಿಸಿದೆ ಎಂದು ಬಸಿತ್ ಅಲಿ ಪ್ರಶ್ನಿಸಿದ್ದಾರೆ.
"ನಾನು ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಮತ್ತು ಯಾವಾಗಲೂ ಉಳಿಯುತ್ತೇನೆ. ಅವರೊಬ್ಬ ಕ್ಲಾಸ್ ಪ್ಲೇಯರ್, ಲೆಜೆಂಡ್ ಕ್ರಿಕೆಟಿಗ. ಆದರೆ ಕೋಚ್ ಆಗಿ ಅವರು ಸಂಪೂರ್ಣ ಶೂನ್ಯವಾಗಿ ಕಂಡಿದ್ದಾರೆ. ನೀವು ಭಾರತದಲ್ಲಿ ಟರ್ನಿಂಗ್ ಪಿಚ್ಗಳನ್ನು ಸಿದ್ಧಪಡಿಸಿದ್ದೀರಿ. ಇದಕ್ಕೆ ಉತ್ತರಿಸಿ," ಎಂದು ಬಸಿತ್ ಅಲಿ ವಾಗ್ದಾಳಿ ನಡೆಸಿದರು.