ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಅಂತ್ಯಗೊಳ್ಳಲಿದ್ದು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಇದೇ ವೇಳೆ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅಂತ್ಯದ ವೇಳೆಗೆ ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಲಿದ್ದೇವೆ ಎಂದು ಶುಕ್ರವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದರು.
ಇನ್ನು ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಅವರು ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ, ಮತ್ತೆ ಕೋಚ್ ಆಗಿ ಮುಂದುವರಿಯಲು ಉತ್ಸುಕರಾಗಿಲ್ಲ ಎಂದು ತಿಳಿದುಬಂದಿದೆ.

ಮುಂದಿನ ಮೂರು ವರ್ಷಗಳ ಕಾಲ ಅಂದರೆ, 2027ರಲ್ಲಿ ನಡೆಯುವ 50 ಓವರ್ಗಳ ವಿಶ್ವಕಪ್ವರೆಗೆ ಹೊಸ ಕೋಚ್ನನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಯ್ ಶಾ ತಿಳಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ 2015ರಿಂದ 2019ರವರೆಗೆ ಭಾರತದ ಅಂಡರ್-19 ತಂಡದಲ್ಲಿ ಯಶಸ್ವಿಯಾದ ನಂತರ, 2021ರ ನವೆಂಬರ್ನಲ್ಲಿ ಭಾರತ ಹಿರಿಯ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿ ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದರು.
ಗಮನಾರ್ಹವಾಗಿ, ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು 2023ರ ಏಕದಿನ ವಿಶ್ವಕಪ್ನೊಂದಿಗೆ ಕೊನೆಗೊಳ್ಳಬೇಕಿತ್ತು. ಆದರೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೆ ಮುಖ್ಯ ಕೋಚ್ ಆಗಿ ವಿಸ್ತರಣೆಯನ್ನು ಮಾಡಲು ಬಿಸಿಸಿಐ ನಿರ್ಧರಿಸಿತು.

ಕನ್ನಡಿಗ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ, ಭಾರತ ತಂಡವು ಇಲ್ಲಿಯವರೆಗೆ ಮೂರು ಪ್ರಮುಖ ಪಂದ್ಯಾವಳಿಗಳನ್ನು ಆಡಿದೆ. ಆಸ್ಟ್ರೇಲಿಯಾದಲ್ಲಿ 2022 ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಪರಾಭವಗೊಂಡಿತು.
ನಂತರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (2021-23) ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತು ಮತ್ತು ತವರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಅಹಮದಾಬಾದ್ನಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು.
ಇದೀಗ 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯ ಬರವನ್ನು ಜೂನ್ನಲ್ಲಿ ಕೊನೆಗೊಳಿಸುವ ಮೂಲಕ ಭಾರತ ತಂಡಕ್ಕೆ ವೈಭವವನ್ನು ಮರಳಿ ತರುವ ಮೂಲಕ ಕೋಚ್ ಆಗಿ ತಮ್ಮ ಸಮಯವನ್ನು ಕೊನೆಗೊಳಿಸಲು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎದುರು ನೋಡುತ್ತಿದ್ದಾರೆ.