
ಬೆಂಗಳೂರು, ಸೆಪ್ಟೆಂಬರ್ 20: ಭಾರತದ ಕ್ರಿಕೆಟ್ ದಂತಕತೆ, ಕನ್ನಡಿಗ ರಾಹುಲ್ ದ್ರಾವಿಡ್ ಶುಕ್ರವಾರ (ಸೆಪ್ಟೆಂಬರ್ 20) ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಬಳಗದ ವೇಳೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಭಾನುವಾರ (ಸೆಪ್ಟೆಂಬರ್ 22) 3ನೇ ಟಿ20 ಪಂದ್ಯವನ್ನಾಡಲಿದೆ.
ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ, ಭಾರತದ ವಿರುದ್ಧ 3 ಟಿ20, 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ಟಿ20 ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ದ್ವಿತೀಯ ಪಂದ್ಯದಲ್ಲಿ ಕೊಹ್ಲಿ ಪಡೆ 7 ವಿಕೆಟ್ ಗೆಲುವನ್ನಾಚರಿಸಿತ್ತು. ಸದ್ಯ ಸರಣಿಯಲ್ಲಿ ಭಾರತ 1-0ಯ ಮುನ್ನಡೆಯಲ್ಲಿದೆ.
ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿರುವ ದ್ರಾವಿಡ್, ತಂಡದ ಅಭ್ಯಾಸದ ವೇಳೆ ಭೇಟಿಯಿತ್ತು ಕೋಚ್ ರವಿ ಶಾಸ್ತ್ರಿ ಜೊತೆ ಕೊಂಚ ಮಾತುಕತೆ ನಡೆಸಿದರು. ದ್ರಾವಿಡ್ ಮತ್ತು ಶಾಸ್ತ್ರಿ ಜೊತೆಗಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಟ್ವೀಟ್ನಲ್ಲಿ 'ಭಾರತದ ಕ್ರಿಕೆಟ್ನ ಇಬ್ಬರು ಶ್ರೇಷ್ಠರು ಭೇಟಿಯಾದಾಗ' ಎಂದು ಸಾಲನ್ನು ಸೇರಿಸಲಾಗಿದೆ.
ಟೀಮ್ ಇಂಡಿಯಾದಲ್ಲಿ ಅದರಲ್ಲೂ ಮುಖ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಗ್ರೇಟ್ ವಾಲ್ ಎಂದು ಖ್ಯಾತರಾಗಿದ್ದ ದ್ರಾವಿಡ್, ಭಾರತ 'ಎ' ತಂಡಕ್ಕೆ ಕೋಚ್ ಆಗಿದ್ದಾಗ ಶ್ರೇಯಸ್ ಐಯ್ಯರ್, ಮನೀಷ್ ಪಾಂಡೆ, ಕೃನಾಲ್ ಪಾಂಡ್ಯ, ರಿಷಬ್ ಪಂತ್, ನವದೀಪ್ ಸೈನಿ, ಕೆಎಲ್ ರಾಹುಲ್, ದೀಪಕ್ ಚಾಹರ್ ಇಂಥ ಆಟಗಾರರು ಬೆಳಕಿಗೆ ಬರುವಲ್ಲಿ ಪ್ರಮುಖ ಕಾರಣರಾಗಿದ್ದವರು.