
ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕೆ ಭಾರತದ ಖ್ಯಾತ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಕರೆ ನೀಡಿದ್ದಾರೆ. ದೇಶದ ಜನತೆಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ''ಇಡೀ ವಿಶ್ವ ಒಟ್ಟಾಗಿ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಡಾಕ್ಟರ್, ನರ್ಸ್, ಪೊಲೀಸರು ಹೀಗೆ ನಮ್ಮ ರಕ್ಷಣೆಗೆ ನಿಂತಿರುವ ಅನೇಕರಿಗೆ ಪ್ರೋತ್ಸಾಹ ನೀಡಲು ಇದು ಒಳ್ಳೆಯ ಅವಕಾಶ. ನಾವು ನಮ್ಮ ಮನೆಯಲ್ಲಿಯೇ ಇರುವುದರ ಮೂಲಕ ಅವರಿಗೆ ಪ್ರೋತ್ಸಾಹ ನೀಡೋಣ'' ಎಂದಿದ್ದಾರೆ.
''ಮನೆಯಲ್ಲಿಯೇ ಇರುವುದರ ಮೂಲಕ ನಮ್ಮ ದೇಶದ ಸೇವೆ ಮಾಡೋಣ. ಮನೆಯಲ್ಲಿ ಇದ್ದ ಸಮಯವನ್ನು ಸರಿಯಾಗಿ ಬಳಸಿಕೊಳ್ಳೋಣ. ನಮಗಾಗಿ ಹಗಲು ರಾತ್ರಿ ಶ್ರಮವಹಿಸುತ್ತಿರುವರಿಗೆ ಧನ್ಯವಾದ'' ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕೊರೊನಾ ತಡೆಗೆ ನಾವು ಮನೆಯಲ್ಲಿಯೇ ಇರಬೇಕು ಎಂದು ಜನರಿಗೆ ಮನವಿ ಮಾಡಿರುವ ರಾಹುಲ್ ದ್ರಾವಿಡ್, ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವವರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ಈ ವಿಡಿಯೋವನ್ನು ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ರಾಹುಲ್ ಮಾತಿಗೆ ಮೆಚ್ಚಿಗೆ ವ್ಯಕ್ತವಾಗಿದೆ. ಅವರ ಮಾತನ್ನು ಪಾಲಿಸುವಂತೆ ಅಭಿಮಾನಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಲಾಕ್ ಡೌನ್ ಇಂದು ಆರನೇ ದಿನಕ್ಕೆ ಕಾಲಿಟ್ಟದೆ. ಈವರೆಗೆ ಭಾರತದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು 1 ಸಾವಿರ ದಾಟಿದೆ. ಕರ್ನಾಟಕದಲ್ಲಿಯೂ 80ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢವಾಗಿವೆ.