ವಿಶ್ವಕಪ್ ಸನಿಹದಲ್ಲಿರವಾಗ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಿದೆ. ಶುಕ್ರವಾರ ಈ ಸರಣಿಯ ಮೊದಲ ಪಂದ್ಯ ಆಯೋಜನೆಯಾಗಲಿದ್ದು ಮೊಹಾಲಿಯಲ್ಲಿ ಎರಡು ತಂಡಗಳು ಕೂಡ ಕಾದಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನಾದಿನ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ವಿಶ್ವಕಪ್ಗೂ ಮುನ್ನ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿರುವ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಿಗೆ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದೆ. ಈ ನಿರ್ಧಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಈ ವಿಚಾರವಾಗಿ ಕೋಚ್ ದ್ರಾವಿಡ್ ಸ್ಪಷ್ಟನೆಯನ್ನು ನೀಡಿದ್ದಾರೆ.

" ನಮ್ಮ ದೃಷ್ಟಿಕೋನದಿಂದ ವಿಶೇಷವಾಗಿ ವಿರಾಟ್ ಮತ್ತು ರೋಹಿತ್ ಅವರಂತಾ ಆಟಗಾರರನ್ನು ನಾವು ವಿಶ್ವಕಪ್ನ ಮೊದಲ ಪಂದ್ಯಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಇರಲು ಬಯಸುವ ಜಾಗದಲ್ಲಿ ಅವಕಾಶ ಮಾಡಿಕೊಡುವುದು ಮುಖ್ಯವಾಗುತ್ತದೆ. ಸಾಕಷ್ಟು ಪಂದ್ಯಗಳನ್ನು ಆಡಿದ ಅನುವ ಹೊಂದಿರುವ ಈ ಆಟಗಾರರಿಗೆ ವಿಶ್ವಕಪ್ನಂಥಾ ಟೂರ್ನಿಗೆ ಹೇಗೆ ಸಿದ್ಧವಾಗಬೇಕು ಎನ್ನುವುದು ತಿಳಿದಿದೆ."
" ವಿಶ್ವಕಪ್ನ ಹಿನ್ನೆಲೆಯಲ್ಲಿ ಈ ಬಹಳಷ್ಟು ನಿರ್ಧಾರಗಳನ್ನು ಅವರಲ್ಲಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ರೋಹಿತ್, ಕೊಹ್ಲಿ ಮಾತ್ರವಲ್ಲಉಳಿದ ಅನುಭವಿ ಆಟಗಾರರು ಕೂಡ ವಿಶ್ವಕಪ್ ಸಿದ್ಧತೆಗಾಗಿ ದಿನಚರಿಗಳನ್ನು ಹೊಂದಿದ್ದಾರೆ. ಹಾಗೂ ಮೊದಲ ಪಂದ್ಯಕ್ಕಾಗಿ ಮಾನಸಿಕವಾಗಿ ಹೇಗೆ ಸಿದ್ಧತೆಗಳನ್ನು ನಡೆಸಬೇಕು ಎನ್ನುವುದನ್ನು ತಿಳಿದುಕೊಂಡಿರುತ್ತಾರೆ" ಎಂದಿದ್ದಾರೆ ಕೋಚ್ ರಾಹುಲ್ ದ್ರಾವಿಡ್.
ಇನ್ನು ಟೀಮ್ ಇಂಡಿಯಾದ ಮತ್ತಿಬ್ಬರು ಪ್ರಮುಖ ಆಟಗಾರರಾದ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಐಯ್ಯರ್ ವಿಚಾರವಾಗಿಯೂ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. "ವಿಶ್ವಕಪ್ನಂಥಾ ದೊಡ್ಡ ಟೂರ್ನಮೆಂಡ್ ಮುಂದಿರುವಾಗ ಹೇಗೆ ಸಿದ್ಧತೆ ನಡೆಸಬೇಕೆನ್ನುವ ವೊಚಾರವಾಗಿ ನಾವು ಚರ್ಚೆ ನಡೆಸಿದ್ದೇವೆ. ವಿಶ್ವಕಪ್ನ ದೃಷ್ಟಿಯಿಂದ ಸಿದ್ಧರಾಗಲು ಮೊದಲ ಎರಡು ಪಂದ್ಯಗಳು ಮುಖ್ಯ ಎನ್ನುವುದನ್ನು ನಾವು ಮ್ಮತದ ಅಭಿಪ್ರಾಯವನ್ನು ಹೊಂದಿದ್ದೇವೆ. ಈ ಎರಡು ಪಂದ್ಯಗಳು ಅವರ ಮನಸ್ಸನ್ನು ಮತ್ತಷ್ಟು ತಾಜಾತನಗೊಳಿಸುತ್ತದೆ" ಎಂದಿದ್ದಾರೆ ರಾಹುಲ್ ದ್ರಾವಿಡ್.
ಮೊದಲ ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್ಗೆ ಒಳಪಟ್ಟು), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್.