
ಬೆಂಗಳೂರು, ಜನವರಿ 14: ಟೀಂ ಇಂಡಿಯಾ ಪರ ಆಡಲು ಆಯ್ಕೆಯಾಗಿರುವ ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಅವರು ತಮ್ಮ ಆಟದ ಸುಧಾರಣೆಯಲ್ಲಿ ಈ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರ ಹಿರಿದಾದುದು ಎಂದಿದ್ದಾರೆ.
ಭಾರತ ಎ ತಂಡದ ಪರ ನ್ಯೂಜಿಲೆಂಡ್ ಪ್ರವಾಸದ ವೇಳೆ ವಿಜಯ್ ಶಂಕರ್ ಅವರಿಗೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದರು. ಆ ಸಂದರ್ಭದಲ್ಲಿ ರಾಹುಲ್ ಅವರು ನೀಡಿದ ಆತ್ಮವಿಶ್ವಾಸ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ ಗಳಿಸಲು ನೆರವಾಯಿತು ಎಂದು ವಿಜಯ್ ಶಂಕರ್ ಹೇಳಿದ್ದಾರೆ.
ಕಳೆದ ವರ್ಷದ ಮಾರ್ಚ್ನಲ್ಲಿ ಶ್ರೀಲಂಕಾದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ನಿದಹಾಸ್ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಮುಸ್ತಾಫಿಜುರ್ ರೆಹಮಾನ್ ಎಸೆತಗಳನ್ನು ಎದುರಿಸಲಾಗದೆ ವಿಜಯ್ ಪರದಾಡಿದ್ದು ಭಾರಿ ಟೀಕೆಗೆ ಒಳಗಾಗಿತ್ತು. ಆದರೆ, ನಂತರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆತ್ಮವಿಶ್ವಾಸ ಬೆಳೆಸಿಕೊಂಡೆ ಎಂದಿದ್ದಾರೆ.
ನ್ಯೂಜಿಲೆಂಡ್ ಸರಣಿ ವೇಳೆ ದ್ರಾವಿಡ್ ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುರಿತು ಚರ್ಚೆ ನಡೆಸಿದೆ. ಅವರ ಸಲಹೆಯಂತೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದೆ. ಇದರಿಂದ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುವುದನ್ನು ಕಲಿಗೆ ಎಂದು ವಿಜಯ್ ಶಂಕರ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 300ರನ್ ಚೇಸ್ ಮಾಡುವ ವೇಳೆ 87ರನ್ ಗಳಿಸಿದ್ದು ನನಗೆ ತೃಪ್ತಿಕೊಟ್ಟಿತು ಎಂದಿದ್ದಾರೆ. ಅಮಾನತುಗೊಂಡಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ವಿಜಯ್ ಶಂಕರ್ ಅವರು ಅಡಿಲೇಡ್ ನಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ (ಜನವರಿ 15ರಂದು) ದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.