ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕ್ರಿಕೆಟ್ ಮೈದಾನ ಬಿಟ್ಟು ಬಹಳ ದಿನಗಳೇ ಕಳೆದಿವೆ. ಆದರೆ ಮೈದಾನದಿಂದ ಹೊರ ನಡೆದರೂ, ಕೋಚ್ ಆಗಿ ಮಿಂಚು ಹರಿಸುತ್ತಿದ್ದಾರೆ. ಜೂನ್ ಹಾಗೂ ಜುಲೈನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಇವರು, ಚಾಂಪಿಯನ್ ಭಾರತದ ತಂಡದ ಕೋಚ್ ಆಗಿದ್ದರು. ಈಗ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರ ಇಬ್ಬರು ಮಕ್ಕಳು ಕ್ರಿಕೆಟ್ ಮೈದಾನದಲ್ಲಿ ತಮ್ಮದೇ ಶೈಲಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.
ಡಿಸೆಂಬರ್ 6 ರಿಂದ ಆರಂಭವಾಗಲಿರುವ ವಿಜಯ್ ಮರ್ಚಂಟ್ ಟ್ರೋಫಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಕಟಿತ ತಂಡದಲ್ಲಿ ರಾಹುಲ್ ದ್ರಾವಿಡ್ ಅವರ ಎರಡನೇ ಪುತ್ರ ಅನ್ವಯ್ ದ್ರಾವಿಡ್ ಅವರು ಸ್ಥಾನ ಪಡೆದಿದ್ದಾರೆ. ಪ್ರಕಟಿತ ತಂಡವನ್ನು ಧ್ರುವ ಕೃಷ್ಣನ್ ಅವರು ಮುನ್ನಡೆಸಲಿದ್ದಾರೆ. ಇನ್ನು ಅನ್ವಯ್ ದ್ರಾವಿಡ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರು ವಿಕೆಟ್ ಕೀಪರ್ ರೂಪದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕರ್ನಾಟಕದ ಪರ ಅನ್ವಯ್ ದ್ರಾವಿಡ್ ಹಲವು ವಯೋಮಿತ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಇತ್ತೀಚಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ 16 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಇವರು ಬೆಂಗಳೂರು ವಲಯದ ಪರ ಬ್ಯಾಟ್ ಮಾಡಿ 200 ರನ್ ಸಹ ಸಿಡಿಸಿದ್ದರು. ಇವರ ಅಣ್ಣ ಸಮಿತ್ ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಬಂದಿದ್ದಾರೆ. ಇತ್ತೀಚಿಗೆ ನಡೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸಮಿತ್ ಚಾಂಪಿಯನ್ ಮೈಸೂರು ತಂಡದ ಭಾಗವಾಗಿದ್ದರು. ಆದರೆ ಟೂರ್ನಿಯಲ್ಲಿ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ಟೀಮ್ ಇಂಡಿಯಾದ ಟೆಸ್ಟ್ ಸ್ಪೇಷಲಿಸ್ಟ್ ಬ್ಯಾಟರ್ ರಾಹುಲ್ ದ್ರಾವಿಡ್, ಭಾರತದ ಮಾಜಿ ನಾಯಕ. ಇವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರು ಆದರು. ಇವರು ಟೀಮ್ ಇಂಡಿಯಾ ಅಂಡರ್ 19 ಹಾಗೂ ಭಾರತ ಎ ತಂಡದ ಕೋಚ್ ಸಹ ಆಗಿ ಕಾರ್ಯ ನಿರ್ವಹಿಸಿದರು. ಇವರ ಅನುಭವಕ್ಕೆ ಮಣೆ ಹಾಕಿದ ಬಿಸಿಸಿಐ ಭಾರತ ಹಿರಿಯರ ಪುರುಷರ ತಂಡದ ಕೋಚ್ ಹುದ್ದೆ ನೀಡಿತು. ಈ ವೇಳೆ ದ್ರಾವಿಡ್ ಅಧಿಕಾರಾವಧಿಯಲ್ಲಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಏಕದಿನ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಕರ್ನಾಟಕ ತಂಡ: ಧ್ರುವ ಕೃಷ್ಣನ್, ಶಿವು ಎಂ, ಅನ್ವಯ್ ದ್ರಾವಿಡ್, ಶ್ಯಾಮಂತಕ್ ಅನಿರುದ್ಧ್, ಸುಕೃತ್ ಜೆ, ಅರುಶ್ ಜೈನ್, ಅಯಾನ್ ಶರ್ಮೋದ್ ಕುಮಾರ್, ಧ್ಯಾನ್ ಮಹೇಶ ಹಿರೇಮಠ, ಅಥರ್ವ್ ಎಸ್ ದೇಶಪಾಂಡೆ, ಗೌರವ್ ವೆಂಕಟೇಶ್, ಸುಜಿತ್ ವೇಲನ್ ಬಿ, ಗಗನ್ ಸಾಯಿ ಕೇತಿರೆಡ್ಡಿ, ಆದಿತ್ಯ ಝಾ, ಆರ್ಯ ಜೆ ಗೌಡ, ಧ್ರುವ ಮೋಧೆ, ಅಧೃತ್ ರಾವ್