
ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ತೋರಿದ ಅತ್ಯಂತ ಕಳಪೆ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಕಠಿಣ ಪಿಚ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳಿಗೆ ಮಾರ್ಗದರ್ಶನ ನೀಡಲು ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾಗೆ ತೆರಳಬೇಕು ಎಂದು ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 36 ರನ್ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಮೊತ್ತ ಎಂಬ ಅವಮಾನಕ್ಕೆ ಕಾರಣವಾಗಿದೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ದಿಲೀಪ್ ವೆಂಗ್ ಸರ್ಕಾರ್ ರಾಹುಲ್ ದ್ರಾವಿಡ್ ಅವರನ್ನು ಆಸ್ಟ್ರೇಲಿಯಾಗೆ ಕಳುಹಿಸುವ ಸಲಹೆಯನ್ನು ನೀಡಿದ್ದಾರೆ.
"ಭಾರತ ತಂಡಕ್ಕೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ತಕ್ಷಣವೇ ಆಸ್ಟ್ರೇಲಿಯಾಗೆ ಕಳುಹಿಸಬೇಕು. ಆಸ್ಟ್ರೇಲಿಯಾದ ಕಂಡೀಶನ್ನಲ್ಲಿ ಚೆಂಡು ಹೇಗೆ ವರ್ತಿಸುತ್ತದ ಎಂಬುದಕ್ಕೆ ರಾಹುಲ್ ದ್ರಾವಿಡ್ ಅವರಿಗಿಂತ ಉತ್ತಮವಾಗಿ ಸಲಹೆ ನೀಡಲು ಸಾಧ್ಯವಿಲ್ಲ. ನೆಟ್ನಲ್ಲಿ ರಾಹುಲ್ ದ್ರಾವಿಡ್ ಅವರ ಉಪಸ್ಥಿತಿ ತಂಡಕ್ಕೆ ದೊಡ್ಡ ಬಲವನ್ನು ನೀಡಲಿದೆ" ಎಂದು ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ.
ಭಾರತ ರಾಷ್ಟ್ರೀಯ ತಂಡಕ್ಕಾಗಿ ರಾಹುಲ್ ದ್ರಾವಿಡ್ ಅವರ ಸೇವೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗುವುದರಿಂದ ಇದು ತುಂಬಾ ಅನುಕೂಲವಾಗಲಿದೆ ಎಂದು ದಿಲೀಪ್ ವೆಂಗ್ ಸರ್ಕಾರ್ ಹೇಳಿದ್ದಾರೆ.
"ರಾಹುಲ್ ದ್ರಾವಿಡ್ ಎರಡು ವಾರಗಳ ಕ್ವಾರಂಟೈನ್ ಪೂರೈಸಬೇಕುದ್ದರೂ ಮೂರನೇ ಟೆಸ್ಟ್ನ ಬಳಿಕ ಅವರ ಲಭ್ಯತೆ ತಂಡಕ್ಕೆ ದೊರೆಯಲಿದೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ದ್ರಾವಿಡ್ ತಂಡಕ್ಕೆ ನೆಟ್ನಲ್ಲಿ ನೆರವನ್ನು ನೀಡಬಹುದು" ಎಂದು ವೆಂಗ್ ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.