ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಸ್ಟಾರ್ ಆಟಗಾರ ಲಭ್ಯತೆಯ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಮೌನ ಮುರಿದಿದೆ. ಏಷ್ಯಾಕಪ್ನಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾದ ಭಾಗವಾಗುತ್ತಾರಾ? ಈ ಪ್ರಶ್ನೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.
ಏಷ್ಯಾಕಪ್ಗೂ ಮುನ್ನ ಬೆಂಗಳೂರಿನಲ್ಲಿ ಒಂದು ವಾರದ ಶಿಬಿರವಿದೆ, ಈ ಶಿಬಿರವು ಆಗಸ್ಟ್ 23 ರಿಂದ ಪ್ರಾರಂಭವಾಗಲಿದೆ. ಏಷ್ಯಾಕಪ್ಗೂ ಮುನ್ನ ಗಾಯದ ಸಮಸ್ಯೆಗೆ ಸಿಲುಕಿದ್ದ ಹಲವು ಆಟಗಾರರು ಫಿಟ್ ಆಗಿ ತಂಡ ಸೇರಿಕೊಳ್ಳಲು ಇದು ಉತ್ತಮ ವೇದಿಕೆ. ಚೇತರಿಸಿಕೊಂಡ ಆಟಗಾರರಿಗೆ ತಮ್ಮ ಫಿಟ್ನೆಸ್ ಸಾಬೀತು ಪಡೆಸಲು ಸದಾವಕಾಶವಾಗಿದೆ.

ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕಾಣಬಹುದು ಎಂಬ ಪ್ರಶ್ನೆಗೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಐಪಿಎಲ್ 2023ರ ಋತುವಿನಲ್ಲಿ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಆ ನಂತರ ಅವರು ಕ್ರಿಕೆಟ್ ಅಂಗಳದಿಂದ ದೂರವಿದ್ದರು. ಇದೇ ಸಮಯದಲ್ಲಿ, ಗಾಯದ ನಂತರ ಕೆಎಲ್ ರಾಹುಲ್ ಚಿಕಿತ್ಸೆ ಪಡೆದರು. ಆದರೆ, ಇದೀಗ ಅವರು ನಿರಂತರವಾಗಿ ನೆಟ್ಸ್ನಲ್ಲಿ ಅಭ್ಯಾಸ ನಡೆಸುತಿದ್ದು, ಭಾರತ ತಂಡ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಭಾರತೀಯ ಅಭಿಮಾನಿಗಳಿಗೆ ಸಂತಸದ ಸುದ್ದಿ ಬಂದಿದೆ.
ಶ್ರೇಯಸ್ ಅಯ್ಯರ್ ಕೂಡ ಗಾಯದಿಂದ ಬಹುತೇಕ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ಯಾವಾಗ ಕ್ಷೇತ್ರಕ್ಕೆ ಮರಳುತ್ತಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಪುನರಾಗಮನ ಮಾಡಬಹುದು ಎಂದು ನಂಬಲಾಗಿದೆ. ಏಷ್ಯಾಕಪ್ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾಗೆ ಮರಳಿದರೆ ಟೀಮ್ ಮ್ಯಾನೇಜ್ಮೆಂಟ್ ಸಮಸ್ಯೆ ಕಡಿಮೆಯಾಗಬಹುದು.
ಸದ್ಯ ಟೀಮ್ ಇಂಡಿಯಾ ವಿಶ್ವಕಪ್ ತಂಡವನ್ನು ರಚಿಸುವಲ್ಲಿ ಬಹುವಾಗಿ ಕಾಡ್ತಾ ಇರುವ ಒಂದು ಸ್ಥಾನ ಅಂದರೆ, ಅದು ನಾಲ್ಕನೇ ಸ್ಥಾನ. ಈ ಸ್ಟಾರ್ ಆಟಗಾರರು ಇಬ್ಬರೂ ಫಿಟ್ ಆಗಿ ಮೈದಾನಕ್ಕೆ ಇಳಿದಿದ್ದೇ ಆದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಚಿಂತೆ ಕಡಿಮೆ ಆಗಬಹುದು. ಶ್ರೇಯಸ್ ಅಯ್ಯರ್ ನಿಜಕ್ಕೂ ನಾಲ್ಕನೇ ಕ್ರಮಾಂಕದಲ್ಲಿ ಸ್ಥಿರವಾಗಿ ಬ್ಯಾಟ್ ಮಾಡಬಲ್ಲ ಆಟಗಾರ. ತಮ್ಮ ಮೋಡಿಯ ಬ್ಯಾಟಿಂಗ್ ಶೈಲಿಯಿಂದ ಈ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲರು.
ಐದನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್ ಮಾಡಿದರೆ ತಂಡದ ಬ್ಯಾಟಿಂಗ್ ಲೈನ್ ಅಪ್ ಇನ್ನು ಬಲವಾಗುತ್ತದೆ. ಈ ಇಬ್ಬರೂ ಬೇಗ ಚೇತರಿಸಿಕೊಂಡು, ವಿಶ್ವಕಪ್ಗೂ ಮುನ್ನ ಕೆಲವು ಪಂದ್ಯಗಳನ್ನು ಆಡಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದರೆ, ಟೀಮ್ ಮ್ಯಾನೇಜ್ಮೆಂಟ್ ಇವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಿದೆ. ಈ ಮೂಲಕ ಮಧ್ಯಮ ಕ್ರಮಾಂಕದ ತಲೆ ನೋವು ನಿವಾರಣೆ ಆಗಲಿದೆ.