ಜೂನ್ 4 ಮಂಗಳವಾರ, ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಐಸಿಸಿ 2024ರ ಟಿ20 ವಿಶ್ವಕಪ್ ಟೂರ್ನಿಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾ ತೆರಳಿದೆ.
ರಾಹುಲ್ ದ್ರಾವಿಡ್ ಅವರ ಅವಧಿ ಈ ತಿಂಗಳ ಕೊನೆಯಲ್ಲಿ ಅಂತ್ಯವಾಗಲಿದೆ. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕೋಚ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಹುಡುಕಾಟ ನಡೆಸುತ್ತಿದೆ. ಇತ್ತೀಚೆಗೆ ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸುವುದಿಲ್ಲ ಎಂದು ರಾಹುಲ್ ದ್ರಾವಿಡ್ ಸ್ಪಷ್ಟವಾಗಿ ಹೇಳಿದ್ದಾರೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ದ್ರಾವಿಡ್ ಮಾತನಾಡಿದ್ದಾರೆ.
ಟಿ20 ವಿಶ್ವಕಪ್ ನಂತರ ಕೋಚ್ ಹುದ್ದೆಗೆ ವಿದಾಯ ಹೇಳುತ್ತೇನೆ. ಇದು ನನ್ನ ಕೊನೆಯ ಟೂರ್ನಿ ಆಗಿದೆ. ಈ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸುವುದಿಲ್ಲ ಎಂದು ದ್ರಾವಿಡ್ ಖಚಿತಪಡಿಸಿದ್ದಾರೆ.
ನನ್ನ ಕೋಚಿಂಗ್ ಅವಧಿಯಲ್ಲಿ ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ನಾನು ಕೋಚ್ ಆಗಿ ಭಾರತಕ್ಕಾಗಿ ಕಾರ್ಯನಿರ್ವಹಿಸಿದ ಎಲ್ಲಾ ಪಂದ್ಯಗಳು ನನಗೆ ಬಹಳ ಮುಖ್ಯವಾಗಿವೆ. ಟಿ20 ವಿಶ್ವಕಪ್ ನನ್ನ ಕೊನೆಯ ಪಂದ್ಯವಾಗಿರುವುದರಿಂದ ಇದು ಭಿನ್ನವಾಗಿಲ್ಲ.
ನಾನು ಭಾರತಕ್ಕೆ ಕೋಚ್ ಆಗಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಇದು ನಿಜವಾಗಿಯೂ ವಿಶೇಷವಾದ ಕೆಲಸ ಎಂದು ಭಾವಿಸುತ್ತೇನೆ. ಭಾರತ ತಂಡದೊಂದಿಗೆ ಕೆಲಸ ಮಾಡುವುದನ್ನು ಆನಂದಿಸಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ ನಂತರವೂ ಐಸಿಸಿ ಪ್ರಶಸ್ತಿ ಗೆಲ್ಲುವಲ್ಲಿ ಟೀಮ್ ಇಂಡಿಯಾ ವಿಫಲವಾಗಿದೆ. ಆದರೆ, ಟೀಮ್ ಇಂಡಿಯಾ 2022ರ ಟಿ 20 ವಿಶ್ವಕಪ್ನ ಸೆಮಿಫೈನಲ್ ತಲುಪಿದೆ. ಕಳೆದ ವರ್ಷ ಭಾರತ ತಂಡವು 2023ರ ಏಕದಿನ ವಿಶ್ವಕಪ್ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರನ್ನರ್ ಅಪ್ ಆಗಿದೆ.