
ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಸತತ ಮೂರನೇ ಪಂದ್ಯದಲ್ಲೂ ವಿಫಲವಾಗುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಈ ಸತತ ವೈಫಲ್ಯದ ಕಾರಣದಿಂದಾಗ ಕೆಎಲ್ ರಾಹುಲ್ ಆಡುವ ಬಳಗದಿಂದ ಹೊರಗುಳಿಯಬಹುದು ಎಂಬ ಅನುಮಾನಗಳು ಕೂಡ ಮೂಡುವಂತೆ ಮಾಡಿತು. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ. ನಾಯಕ ಕೊಹ್ಲಿ ಬಳಿಕ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಕೂಡ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.
"ಪ್ರತಿಯೊಬ್ಬರೂ ಕಠಿಣ ಸಂದರ್ಭಗಳನ್ನು ಎದುರಿಸಿರುತ್ತಾರೆ. ಕೆಎಲ್ ರಾಹುಲ್ ಟಿ20 ಮಾದರಿಯಲ್ಲಿ ನಮ್ಮ ಅತ್ಯುತ್ತಮ ಬ್ಯಾಟ್ಸ್ಮನ್. 40ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿರುವ ಅವರು 145ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. 3 ವೈಫಲ್ಯತೆ ಅವರನ್ನು ಟಿ20 ಮಾದರಿಯಲ್ಲಿ ನಮ್ಮ ತಂಡದ ಅತ್ಯುತ್ತಮ ಆಟಗಾರ ಎಂಬ ಸತ್ಯವನ್ನು ಬದಲಾಯಿಸುವುದಿಲ್ಲ" ಎಂದಿದ್ದಾರೆ ವಿಕ್ರಂ ರಾಥೋರ್.
"ಈಗ ನಾವು ಆತನ ಬೆಂಬಲಕ್ಕೆ ನಿಲ್ಲಬೇಕಾದ ಅಗತ್ಯವಿದೆ. ಈ ಕಠಿಣ ಸಂದರ್ಭದಿಂದ ಆತ ಸಂಪೂರ್ಣವಾಗಿ ಹೊರಬರುತ್ತಾನೆ ಎಂಬ ಸಂಒಊರ್ಣ ನಂಬಿಕೆ ನನ್ನಲ್ಲಿದೆ" ಎಂದು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಕೆಎಲ್ ರಾಹುಲ್ ಫಾರ್ಮ್ಗೆ ಮರಳುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಡುವ ಬಳಗದಿಂದ ಹೊರಗುಳಿದ ಕಾರಣದಿಂದಾಗಿ ಅವರ ಬ್ಯಾಟಿಂಗ್ ತುಕ್ಕು ಹಿಡಿದಂತಾಗುರಬಹುದು ಎಂಬುದನ್ನು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಒಪ್ಪಿಕೊಂಡಿದ್ದಾರೆ. ಆದರೆ ಅವರು ಸಾಕಷ್ಟು ನೆಟ್ ಸೆಶನ್ಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
"ಅವರು ಎಲ್ಲವನ್ನೂ ಮಾಡಬಹುದು, ಕೆಎಲ್ ರಾಹುಲ್ ಅವರಂತಾ ಆಟಗಾರ ಒಂದು ಇನ್ನಿಂಗ್ಸ್ ಅಥವಾ ಒಂದು ಉತ್ತಮ ಹೊಡೆತದಿಂದ ತಮ್ಮ ಫಾರ್ಮ್ಗೆ ಮರಳಬಹುದು" ಎಂಬ ಭರವಸೆಯನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ವಿವರಿಸಿದ್ದಾರೆ.