ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯ ರಾಯ್ಪುರ್ದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ದಕ್ಷಿಣ ಆಫ್ರಿಕಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಜಯ ಸಾಧಿಸಿದೆ. ಭಾರತ 359 ರನ್ಗಳ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುತ್ತಿದ್ದಂತೆ ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಭಾರತ ನೀಡಿದ್ದ 359 ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಇನ್ನು 4 ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನು ಗೆದ್ದು ಬೀಗಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಇಬ್ಬರು ಕನ್ನಡಿಗರು ಆಡಿದರು. ನಾಯಕ ಕೆಎಲ್ ರಾಹುಲ್ ಹಾಗೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಮೈದಾನದಲ್ಲಿ ಕನ್ನಡ ಮಾತನಾಡಿದ್ದು, ಸಖತ್ ವೈರಲ್ ಆಗಿದೆ. ರಾಹುಲ್ ಪಂದ್ಯದ ವೇಳೆ ಪ್ರಸಿದ್ಧ್ ಕೃಷ್ಣಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದು ಅಚ್ಚ ಕನ್ನಡದಲ್ಲಿ ಅವರಿಗೆ ಹೇಳಿರುವ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.

ಪ್ರಸಿದ್ಧ್ ಕೃಷ್ಣಾ ಹಾಗೂ ಕೆಎಲ್ ರಾಹುಲ್ ಅವರು ನಡುವೆ ಆಗಾಗ ಕನ್ನಡದಲ್ಲಿ ಮಾತುಕತೆ ನಡೆಯುತ್ತದೆ. ಈ ಮೊದಲು ಸಹ ಇಂಗ್ಲೆಂಡ್ ಪ್ರವಾಸದಲ್ಲಿ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕನ್ನಡದಲ್ಲಿ ಮಾತನಾಡಿದ್ದು ಸಖತ್ ವೈರಲ್ ಆಗಿತ್ತು. ಈಗ ರಾಯ್ಪುರ್ದಲ್ಲಿ ನಡೆದ ಪಂದ್ಯದಲ್ಲೂ ರಾಹುಲ್ ಪ್ರಸಿದ್ಧ್ ಜೊತೆಗೆ ಕನ್ನಡದಲ್ಲಿ ಮಾತನಾಡಿದ್ದಾರೆ.
ಪ್ರಸಿದ್ಧ್ ಕೃಷ್ಣ ಎರಡನೇ ಏಕದಿನ ಪಂದ್ಯದಲ್ಲಿ ರನ್ಗಳನ್ನು ನೀಡಿ ಕೈ ಸುಟ್ಟುಕೊಂಡರು. ಈ ವೇಳೆ ನಾಯಕ ರಾಹುಲ್ ಅವರು ಅವರಿಗೆ ಕೆಲವು ಸಲಹೆಗಳನ್ನು ನೀಡಿದರು. ಆದರೆ ಪ್ರಸಿದ್ಧ್ ಅದರಂತೆ ನಡೆದುಕೊಳ್ಳದಾಗ ಕೆಎಲ್ ರಾಹುಲ್, ಪ್ರಸಿದ್ಧ್ಗೆ ಹೇಳಿದ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.
ಕೆಎಲ್: ನಿನ್ನ ತಲೆ ಓಡಿಸಬೇಡ ಹೇಳಿದ್ದು ಹಾಕು. ಏನು ಹಾಕಬೇಕು ಎಂದು ಹೇಳಿದ್ದೇನೋ ಅದನ್ನೇ ಹಾಕು.
ಪ್ರಸಿದ್ಧ್: ತಲೆಗೆ ಹಾಕ್ಲಾ?
ಕೆಎಲ್: ತಲೆಗೆಲ್ಲಾ ಬೇಡ ಈಗ. ಹೇಳಿ ಬಂದಿದ್ದೇನು ತಲೆಗೆ ಹಾಕ್ತಿಯಲ್ಲ ಮಗಾ, ಎಂದು ಪ್ರಸಿದ್ಧ್ಗೆ ಹೇಳಿದರು.
ಪ್ರಸಿದ್ಧ್ ರಾಹುಲ್ ಸೂಚಿಸಿದಂತೆ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡದಾಗ ರಾಹುಲ್ ಕೆಂಡ ಕಾರಿದಂತೆ ಕಂಡು ಬಂದಿತು. ಇನ್ಮೊಂದು ವಿಡಿಯೋದಲ್ಲಿ ಕೆಎಲ್ ರಾಹುಲ್ ಮುಂದೆ ಹೊಡಿಲಿ ಮಗ ಎಂದು ಪ್ರಸಿದ್ಧ್ಗೆ ಹೇಳಿದ್ದಾರೆ.
ಪ್ರಸಿದ್ಧ ಕೃಷ್ಣ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ತೆಂಬಾ ಬವುಮಾ ಹಾಗೂ ಮ್ಯಾಥ್ಯೂ ಬ್ರೀಟ್ಜ್ಕೆ ವಿಕೆಟ್ ಪಡೆದರೂ ಸಹ ರನ್ಗಳಿಗೆ ಕಡಿವಾಣ ಹಾಕಲ ವಿಫಲರಾದರು. ಪರಿಣಾಮ ಇವರು ಹಾಕಿದ 8.2 ಓವರ್ಗಳಲ್ಲಿ 85 ರನ್ ನೀಡಿ ಕೈ ಸುಟ್ಟುಕೊಂಡರು.