ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಈ ವೇಳೆ ಆರ್ಸಿಬಿ ತನ್ನ ಸಂಘಟಿತ ಆಟದ ಮೂಲಕ ಗಮನ ಸೆಳೆಯುತ್ತಿದೆ. ಆದರೆ ಆರ್ಸಿಬಿಗೆ ವರುಣನ ಕಾಟ ಬಹುವಾಗಿದೆ. ಹೀಗಾಗಿಯೇ ಐಪಿಎಲ್ ಆಯೋಜಕರು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದು, ಮುಂದಿನ ಆರ್ಸಿಬಿ ಪಂದ್ಯಕ್ಕೆ ಈ ಯೋಜನೆ ಜಾರಿಗೆ ಬರಲಿದೆ. ಹಾಗಿದ್ದರೆ ಐಪಿಎಲ್ ಕಾರ್ಯಕಾರಣಿ ಮಂಡಳಿ ಕೈಗೊಂಡ ಆ ನಿರ್ಧಾರಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್ಸಿಬಿ ತನ್ನ ಹಿಂದಿನ ಪಂದ್ಯವನ್ನು ಮೇ 17 ರಂದು ಎಂ ಚಿನ್ನಸ್ವಾಮಿ ಆಡಬೇಕಿತ್ತು. ಆದರೆ ಈ ಪಂದ್ಯ ನಡೆಯಲು ಅವಕಾಶವನ್ನೇ ನೀಡಲಿಲ್ಲ. ಇದನ್ನೇ ಮನಗೊಂಡು ಐಪಿಎಲ್ ಆರ್ಸಿಬಿ ಮುಂದಿನ ಪಂದ್ಯವನ್ನು ಲಕ್ನೋ ತಂಡಕ್ಕೆ ಶಿಫ್ಟ್ ಮಾಡಿದೆ. ಆರ್ಸಿಬಿ, ಎಸ್ಆರ್ಎಚ್ ಪಂದ್ಯ ಮೇ 23 ರಂದು ಲಕ್ನೋದಲ್ಲಿ ನಡೆಯಲಿದೆ. ಇನ್ನು ಆರ್ಸಿಬಿ ತನ್ನ ಲೀಗ್ ಹಂತದ ಎರಡೂ ಪಂದ್ಯಗಳನ್ನು ಲಕ್ನೋನಲ್ಲಿ ಆಡಲಿದೆ. ಎಸ್ಆರ್ಎಚ್ ಹಾಗೂ ಎಲ್ಎಸ್ಜಿ ವಿರುದ್ಧದ ಪಂದ್ಯವನ್ನು ಆರ್ಸಿಬಿ ಲಕ್ನೋನಲ್ಲಿ ಆಡಲಿದೆ. ಎಲ್ಎಸ್ಜಿ ವಿರುದ್ಧದ ಪಂದ್ಯ ಮೇ 27 ರಂದು ನಡೆಯಲಿದೆ.

ಎಸ್ಆರ್ಎಚ್ ಮಂಗಳವಾರ ಬೆಂಗಳೂರಿಗೆ ಪ್ರಯಾಣ ಬೆಳಸಬೇಕಿತ್ತು. ಆದರೆ ಸನ್ ತಂಡಕ್ಕೆ ಅಲ್ಲಿಯೇ ಉಳಿಯುವಂತೆ ಸೂಚಿಸಲಾಗಿದೆ. ಅಲ್ಲದೆ ಆರ್ಸಿಬಿ ವಿರುದ್ಧದ ಪಂದ್ಯವನ್ನು ಲಕ್ನೋನಲ್ಲಿ ಆಡಲಿದೆ ಎಂದು ತಿಳಿಸಿದೆ. ಇದಕ್ಕೆ ಕಾರಣ ಹಾವಾಮಾನ ಇಲಾಖೆ ನೀಡಿರುವ ಯೆಲ್ಲೋ ಅಲರ್ಟ್ ಮನಗೊಂಡು ಐಪಿಎಲ್ ಕಾರ್ಯಕಾರಣಿ ಈ ನಿರ್ಧಾರವನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು ಹೀಗಾಗಿ ಪಂದ್ಯವನ್ನು ಶಿಫ್ಟ್ ಮಾಡಲಾಗಿದೆ.
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆ ದಿನದಿಂದ ಆರ್ಸಿಬಿ ಆಟಗಾರರು ಒಳಾಂಗಣದಲ್ಲೇ ಅಭ್ಯಾಸವನ್ನು ಮಾಡುವಂತೆ ಆಗಿದೆ. ಇನ್ನು ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಗುಡು ಸಹಿತ ಭಾರಿ ಮಳೆ ಆಗುತ್ತಿದೆ. ಆರ್ಸಿಬಿ ತಂಡಕ್ಕೆ ಮಂಗಳವಾರ ಮಧ್ಯಾಹ್ನ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಳೆ ಆರ್ಸಿಬಿ ತಂಡದ ಅಭ್ಯಾಸಕ್ಕೂ ಬ್ರೇಕ್ ಹಾಕಿದೆ.
ಬಿಸಿಸಿಐ ಪ್ಲೇ ಆಫ್ನ ಎರಡು ಸ್ಥಳಗಳನ್ನು ಅಂತಿಮಗೊಳಿಸಿದೆ. ಮುಲ್ಲನ್ಪುರ ಮತ್ತು ಅಹಮದಾಬಾದ್ನಲ್ಲಿ ಪ್ಲೇ ಆಫ್ ಪಂದ್ಯಗಳಿಗೆ ವೇದಿಕೆ ಕಲ್ಪಿಸಲಿದೆ. ಇನ್ನು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿಯ ಪ್ರಕಾರ ಮುಲ್ಲನ್ಪುರ ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ. ಇನ್ನು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಹೈದರಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯಬೇಕಿದ್ದವು. ಆದರೆ ಭಾರತ ಹಾಗೂ ಪಾಕ್ ನಡುವಣ ಉದ್ವಿಗ್ನತೆಯಿಂದಾಗ ಸ್ಥಗಿತಗೊಂಡಿದ್ದ ಐಪಿಎಲ್, ಒಂದು ವಾರ ಮುಂದೂಡಲಾಯಿತು. ಹೀಗಾಗಿ ಈಗ ಬಿಸಿಸಿಐ ಹೊಸ ಮೈದಾನಗಳನ್ನು ಹೆಸರಿಸಿದೆ.