ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ.
ಈಗ ಎರಡನೇ ಟೆಸ್ಟ್ ಪಂದ್ಯದ ಗೆಲುವಿನ ಮೇಲೆ ಕಣ್ಣಿಟ್ಟಿರುವ ಉಭಯ ತಂಡಗಳಿಗೆ ನಿರಾಸೆಯಾಗುವ ಸಾಧ್ಯತೆಯಿದೆ. ಏಕೆಂದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ. ಮಳೆಯಿಂದಾಗಿ ಈ ಪಂದ್ಯವೂ ವಾಶ್ ಔಟ್ ಆಗುವ ಸಾಧ್ಯತೆ ಹೆಚ್ಚಿದೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 280 ರನ್ಗಳ ಭರ್ಜರಿ ಜಯ ಸಾಧಿಸಿರುವ ಆತಿಥೇಯ ಭಾರತ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ, ಹವಾಮಾನ ಇಲಾಖೆ ಪ್ರಕಾರ ಕಾನ್ಪುರ ಟೆಸ್ಟ್ನ ಮೊದಲ 4 ದಿನಗಳು ಮಳೆಯಾಗಬಹುದು. ಇದರಿಂದ ಪಂದ್ಯ ಕೂಡ ರದ್ದಾಗಿ ಅಭಿಮಾನಿಗಳು ನಿರಾಸೆ ಅನುಭವಿಸಬಹುದು.
ಉತ್ತರಪ್ರದೇಶದಲ್ಲಿ 'ಯಾಗಿ' ಚಂಡಮಾರುತದ ನಿರ್ಗಮನದ ನಂತರವೂ ಅದರ ಪ್ರಭಾವ ಇನ್ನೂ ಕಂಡುಬರುತ್ತಿದೆ. ಸೆಪ್ಟೆಂಬರ್ 27 ರಂದು ಮೊದಲ ದಿನ ಶೇ.93 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ದಿನವಿಡೀ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಎರಡನೇ ದಿನವೂ ಟೆಸ್ಟ್ ಮುಂದುವರೆದಂತೆ ಶೇ.80 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಮೂರನೇ ದಿನ ಶೇ.65% ಹಾಗೂ ನಾಲ್ಕನೇ ದಿನ ಶೇ.59 ರಷ್ಟು ಮಳೆ ಬೀಳಲಿದ್ದು, ಕೊನೆಯ ದಿನ ಶೇ.5 ರಷ್ಟು ಮಾತ್ರ ಮಳೆ ಬೀಳುವ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದು ವೇಳೆ ಐದು ದಿನಗಳ ಕಾಲ ಮಳೆ ಮುಂದುವರಿದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಈ ವೇಳೆ ಭಾರತ 1-0 ಅಂತರದಲ್ಲಿ ಸರಣಿ ಗೆಲ್ಲಲಿದೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪಾಯಿಂಟ್ಗಳ ಪಟ್ಟಿಯಲ್ಲಿ ಕೆಲವು ಬದಲಾವಣೆ ಆಗಲಿದೆ.
ರೋಹಿತ್ ಶರ್ಮಾ ಪಡೆ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಮೇಲೆ ಕಣ್ಣಿಟ್ಟಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ದಾಖಲೆ ಉತ್ತಮವಾಗಿದೆ. ಇದುವರೆಗೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಬಾಂಗ್ಲಾದೇಶ ಗೆಲ್ಲಲು ಸಾಧ್ಯವಾಗಿಲ್ಲ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 14 ಟೆಸ್ಟ್ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 12ರಲ್ಲಿ ಗೆದ್ದಿದ್ದು, ಎರಡು ಪಂದ್ಯ ಡ್ರಾ ಆಗಿದೆ.
ಮತ್ತೊಂದೆಡೆ, ನಜ್ಮುಲ್ ಹುಸೇನ್ ಶಾಂತೊ ನೇತೃತ್ವದ ಬಾಂಗ್ಲಾದೇಶ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಪಾಕಿಸ್ತಾನ ವಿರುದ್ಧ ಗೆದ್ದ ರೀತಿಯಲ್ಲೇ ಭಾರತವನ್ನು ಅಚ್ಚರಿಗೊಳಿಸಬಹುದು. ಮೊದಲ ಬಾರಿಗೆ ಟೀಮ್ ಇಂಡಿಯಾ ಎದುರು ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು 1-1 ರಲ್ಲಿ ಸಮಗೊಳಿಸಬಹುದು.