ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟಿ20 ಪಂದ್ಯ ಮಳೆಗೆ ಆಹುತಿಯಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡನೇ ಬಾರಿಗೆ ಪಂದ್ಯ ಮಳೆಗೆ ಆಹುತಿಯಾಗಿದೆ. ಇದಕ್ಕೂ ಮೊದಲು ಮೊದಲ ಟಿ20 ಪಂದ್ಯವೂ ಸಹ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ, ಮೂರನೇ ಹಾಗೂ ನಾಲ್ಕನೇ ಪಂದ್ಯವನ್ನು ಭಾರತ ಗೆದ್ದಿತ್ತು. ಹೀಗಾಗಿ ಐದನೇ ಪಂದ್ಯ ಕುತೂಹಲ ಮೂಡಿಸಿತ್ತು.
ಐದನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಭಾರತ 4.5 ಓವರ್ಗಳ ಆಟವಾದಾಗ ವಿಕೆಟ್ ನಷ್ಟವಿಲ್ಲದೆ 52 ರನ್ ಕಲೆ ಹಾಕಿತ್ತು. ಅಭಿಷೇಕ್ ಶರ್ಮಾ (23) ಹಾಗೂ ಶುಭಮನ್ ಗಿಲ್ (ಅಜೇಯ 29) ಬಾರಿಸಿದ್ದರು. ಆಗ ಮಳೆ ಸುರಿಯಲು ಪ್ರಾರಂಭಿಸಿತು. ತುಂಬ ಹೊತ್ತು ಕಾಯ್ದ ಬಳಿಕ ಪಂದ್ಯವನ್ನ ರದ್ದು ಎಂದು ಘೋಷಿಸಲಾಯಿತು. ಈ ಮೊದಲೇ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದ್ದ ಭಾರತ ಸರಣಿಯನ್ನು ಗೆದ್ದು ಬೀಗಿತು. ಇನ್ನು ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಆಸ್ಟ್ರೇಲಿಯಾ ಕನಸು ಕಮರಿತು.

ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇವರು ಈ ಸರಣಿಯಲ್ಲಿ 163 ರನ್ ಬಾರಿಸಿದ್ದಾರೆ. ಈ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಅಭಿಷೇಕ್ ನಾನು ಈ ಪ್ರವಾಸವನ್ನು ಎದುರು ನೋಡುತ್ತಿದ್ದೆ. ಈ ಪ್ರವಾಸದಲ್ಲಿ ಬ್ಯಾಟಿಂಗ್ ಮಾಡುವಾಗ ಆನಂದಿಸಿದ್ದೇನೆ. ಪಿಚ್ಗಳು ಬ್ಯಾಟಿಂಗ್ ಫ್ರೆಂಡ್ಲಿ ಆಗಿದ್ದವು. ಹ್ಯಾಜಲ್ವುಡ್ ಅವರೊಂದಿಗೆ ಜಿದ್ದನ್ನು ನಾನು ಆನಂದಿಸಿದ್ದೇನೆ. ಈ ರೀತಿಯ ಬೌಲರ್ಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ನಾನು ಈ ಮೊದಲೇ ಅಭ್ಯಾಸ ಮಾಡಿದ್ದೆ ಎಂದು ಅಭಿಷೇಕ್ ತಿಳಿಸಿದ್ದಾರೆ.
ಪಂದ್ಯ ರದ್ದಾದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ವಾತಾವರಣ ನಮ್ಮ ಕೈಯಲ್ಲಿ ಇಲ್ಲ. ಈ ಸರಣಿಯ ಮೊದಲ ಪಂದ್ಯದಲ್ಲಿ ಸೋತ ಬಳಿಕ, ತಂಡದ ಆಟಗಾರರು ಆಡಿದ ರೀತಿ ಉತ್ತಮ. ಬುಮ್ರಾ, ಅರ್ಷದೀಪ್, ಸ್ಪಿನ್ ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿದರು. ತಂಡ ಅವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟವನ್ನು ಆಡಿದ್ದಾರೆ. ಟಿ20 ವಿಶ್ವಕಪ್ ತಯಾರಿಗೆ ಇನ್ನು 2-3 ಸರಣಿಗಳು ಇವೆ. ಈ ವೇಳೆ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ಸೂರ್ಯ ಹೇಳಿದ್ದಾರೆ.