ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿತು. ಈ ಪಂದ್ಯದಲ್ಲಿ ಲಕ್ನೋ 2 ರನ್ ಜಯ ಸಾಧಿಸಿತು. ಕೊನೆಯ ಓವರ್ನಲ್ಲಿ 9 ರನ್ ನೀಡದಂತೆ ತಡೆಯುವಲ್ಲಿ ಯಶಸ್ವಿಯಾದ ಆವೇಶ್ ಖಾನ್ ಪಂದ್ಯದ ಹೀರೋ ಆಗಿದ್ದರು. ಈ ಪಂದ್ಯದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ತಾತ್ಕಾಲಿಕ ಸಮಿತಿ ಸಂಚಾಲಕ ಜೈದೀಪ್ ಬಿಹಾನಿ ಆರ್ಆರ್ ಮೇಲೆ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ಫಲಿತಾಂಶದ ಬಗ್ಗೆ ಬಿಹಾನಿ ಪ್ರಶ್ನೆಗಳನ್ನು ಎತ್ತಿದ್ದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಹಲವು ಸಂದೇಹಗಳಿಗೆ ಅನುವು ಮಾಡಿಕೊಡುತ್ತದೆ. ರಾಜಸ್ಥಾನ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಹೇಗೆ ಸೋತಿತು ಎಂಬುದು ನನಗೆ ತಿಳಿದಿಲ್ಲ. ಇದನ್ನು ನಾವು ನೋಡಿದರೆ ಬೇರೆ ಸಂದೇಹಗಳು ವ್ಯಕ್ತವಾಗುತ್ತವೆ ಎಂದು ತಿಳಿಸಿದ್ದಾರೆ.

ಲಕ್ನೋ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ನೀಡಿದ ಪ್ರದರ್ಶನ, ರಾಜ್ಯದ ಯುವ ಆಟಗಾರರ ಮೇಲೆ ಯಾವ ಪರಿಣಾಮ ಬೀರುತ್ತದೆ? ಯಾವುದೇ ತಂಡ ತವರು ನೆಲದಲ್ಲಿ ಈ ರೀತಿ ಸೋತಿದೆಯೇ? ಎಂದು ಜೈದೀಪ್ ಬಿಹಾನಿ ಪ್ರಶ್ನಿಸಿದ್ದಾರೆ. 2013 ರಲ್ಲಿ ತಂಡದ ಕೆಲವು ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದರು ಎಂದು ಅವರು ನೆನಪಿಸಿದರು.
ಜೈದೀಪ್ ಬಿಹಾನಿ ಅವರ ಹೇಳಿಕೆಗೆ ರಾಜಸ್ಥಾನ ರಾಯಲ್ಸ್ ಸಹ ಪ್ರತಿಕ್ರಿಯೆ ನೀಡಿದೆ. ಜೈದೀಪ್ ಬಿಹಾನಿ ಹೇಳಿಕೆಗಳೆಲ್ಲಾ ಆಧಾರರಹಿತ, ಸುಳ್ಳು ವರದಿಗಳಾಗಿವೆ ಎಂದು ಆರ್ಆರ್ ಫ್ರಾಂಚೈಸಿ ಹೇಳಿದೆ. ಫ್ರಾಂಚೈಸಿ ಕ್ರೀಡಾ ಮಂಡಳಿ ಅಧ್ಯಕ್ಷ ನೀರಜ್ ಕೆ ಪವನ್, ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರಿಗೆ ಪತ್ರ ಬರೆದಿದೆ. ಆರ್ಸಿಎ ಸಂಚಾಲಕ ಜೈದೀಪ್ ಬಿಹಾನಿ ಅವರಿಂದ ಭವಿಷ್ಯದಲ್ಲಿ ಇಂತಹ ಹೇಳಿಕೆಗಳು ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕ್ರೀಡಾ ಮಂಡಳಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ನೀರಜ್ ಕೆ ಪವನ್ ತಿಳಿಸಿದ್ದಾರೆ. ಅಲ್ಲದೆ ಆರೋಪ ಹೊರಿಸಿದವರ ಬಳಿ ಪುರಾವೆಗಳು ಇದ್ದಲ್ಲಿ ಬಿಸಿಸಿಐಗೆ ನೀಡುವಂತೆ ಸೂಚಿಸಿದ್ದಾರೆ.
ಏಪ್ರಿಲ್ 19 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯಕ್ಕೆ ಜೈಪುರ್ ಅಂಗಳ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ಗೆ 180 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಸೇರಿಸಿ ಸೋಲು ಕಂಡಿತು. ರಾಜಸ್ಥಾನ ಟೂರ್ನಿಯಲ್ಲಿ ಕ್ಲೋಸ್ ಗೇಮ್ ಸೋಲುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ರಾಜಸ್ಥಾನ, ಡೆಲ್ಲಿ ವಿರುದ್ಧದ ಸೂಪರ್ ಓವರ್ನಲ್ಲಿ ಸೋಲು ಕಂಡಿತ್ತು.