ಆರ್ಸಿಬಿ ತಂಡದ ಸ್ಟಾರ್ ಆಟಗಾರ ರಜತ್ ಪಾಟಿದಾರ್ ಅವರ ಬಿರುಸಿನ ಬ್ಯಾಟಿಂಗ್ ಫಲವಾಗಿ ಮಧ್ಯ ಪ್ರದೇಶ ತಂಡ 7 ವಿಕೆಟ್ಗಳಿಂದ ದೆಹಲಿ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮಣಿಸಿತು. ಈ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈ ಹಾಗೂ ಮಧ್ಯ ಪ್ರದೇಶ ತಂಡಗಳು ಕಾದಾಟ ನಡೆಸಲಿವೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ 20 ಓವರ್ಗಳಲ್ಲಿ 5 ವಿಕಟ್ಗೆ 146 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಧ್ಯ ಪ್ರದೇಶ 15.4 ಓವರ್ಗಳಲ್ಲಿ 3 ವಿಕೆಟ್ಗೆ 152 ರನ್ ಸೇರಿಸಿ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ದೆಹಲಿ ಪರ ಪ್ರಿಯಾಂಶ್ ಆರ್ಯ ಹಾಗೂ ಯಶ್ ಧುಲ್ ಅವರ ಜೋಡಿ ದೆಹಲಿ ತಂಡಕ್ಕೆ ಮೊದಲ ವಿಕೆಟ್ಗೆ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಯಶ್ ಧುಲ್ 11 ರನ್ ಬಾರಿಸಿ ಔಟ್ ಆದರು. ಇನ್ನೊಬ್ಬ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 29 ರನ್ ಸಿಡಿಸಿ ಔಟ್ ಆದರು. ನಾಯಕ ಆಯುಷ್ ಬದೋನಿ 19, ಹಿಮ್ಮತ್ ಸಿಂಗ್ 15 ರನ್ಗಳಿಸಿದರು. ಆರ್ಸಿಬಿ ತಂಡದ ಮಾಜಿ ಆಟಗಾರ ಅನುಜ್ ರಾವತ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 33 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ರಾವತ್ 24 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಮಧ್ಯ ಪ್ರದೇಶ ತಂಡದ ಪರ ವೆಂಕಟೇಶ್ ಅಯ್ಯರ್ 2, ಕುಮಾರ್ ಕಾರ್ತಿಕೇಯ್, ಆವೇಶ್ ಖಾನ್, ತ್ರಿಪುರೇಶ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಮಧ್ಯ ಪ್ರದೇಶ ತಂಡದ ಪರ ಅರ್ಪಿತ್ ಗೌಡ , ಸುಭ್ರಾಂಶು ಸೇನಾಪತಿ ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಹರ್ಷಾ ಗ್ವಾಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ಔಟ್ ಆದರು. 3 ವಿಕೆಟ್ಗಳನ್ನು 46 ರನ್ಗಳಿಗೆ ಕಳೆದುಕೊಂಡಿದ್ದ ಮಧ್ಯ ಪ್ರದೇಶ ತಂಡಕ್ಕೆ ಹರ್ಪ್ರಿತ್ ಸಿಂಗ್ ಹಾಗೂ ಆರ್ಸಿಬಿ ತಂಡದ ರಜತ್ ಪಾಟಿದಾರ್ ಜೋಡಿ ನಾಲ್ಕನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ದೆಹಲಿ ಬೌಲರ್ಗಳು ವಿಫಲರಾದರು. ಪರಿಣಾಮ ಹರ್ಪ್ರಿತ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 46 ರನ್ ಸಿಡಿಸಿದರು.
ಭರವಸೆಯ ಆಟಗಾರ ಮಧ್ಯ ಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ 227ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆ ಹಾಕಿದರು. ಇವರು 29 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 66 ರನ್ ಬಾರಿಸಿ ಮಿಂಚಿದರು.