ಸೋಮವಾರ, ಜನವರಿ 22 ರಂದು ಉತ್ತರಪ್ರದೇಶದ ಅಯೋಧ್ಯೆ ನಗರವು ಮಂಗಳಕರವಾದ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗಾಗಿ ತಯಾರಾಗುತ್ತಿದ್ದಂತೆ, ಹಲವು ಕ್ಷೇತ್ರಗಳ ಪ್ರಮುಖ ಗಣ್ಯರು ಪವಿತ್ರ ನಗರದಲ್ಲಿ ಭವ್ಯ ಸಮಾರಂಭಕ್ಕೆ ಆಹ್ವಾನ ಸ್ವೀಕರಿಸಿದ್ದಾರೆ.
ಅಲ್ಲದೆ, ಭಾರತದ ಕ್ರೀಡಾ ಜಗತ್ತಿನಿಂದ ಹಲವಾರು ದೊಡ್ಡ ಹೆಸರುಗಳು ಧಾರ್ಮಿಕ ಸಮಾರಂಭದ ಭಾಗವಾಗಲು ಆಹ್ವಾನ ಪಡೆದಿದ್ದಾರೆ. ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಮತ್ತು ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿಯಂತಹ ದಿಗ್ಗಜರು ಆಹ್ವಾನಿತರಲ್ಲಿ ಸೇರಿದ್ದಾರೆ.

ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರು ಅಯೋಧ್ಯೆಯಲ್ಲಿ ನಡೆಯುವ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ ಇತ್ತೀಚಿನ ಕ್ರಿಕೆಟಿಗರಾಗಿದ್ದಾರೆ. ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಇನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಹಾಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೂ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಬಂದಿದೆ.

ತಮಿಳುನಾಡಿನ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಎಸ್.ಜಿ. ಸೂರ್ಯ ಮತ್ತು ಉಪಾಧ್ಯಕ್ಷ ವೆಂಕಟರಾಮ್ ಸಿ ಅವರು ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ಗೆ ಚೆನ್ನೈನ ಅವರ ನಿವಾಸದಲ್ಲಿ ಆಹ್ವಾನವನ್ನು ನೀಡಿದರು.
ಅಯೋಧ್ಯೆಯಲ್ಲಿ ಎಂಎಸ್ ಧೋನಿ ಭಾಗವಹಿಸುವಿಕೆ ಬಗ್ಗೆ ರಹಸ್ಯವಾಗಿದ್ದರೂ, ಜನವರಿ 22 ರಂದು ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಬಿಸಿಸಿಐನಿಂದ ಅನುಮತಿ ಪಡೆದಿದ್ದಾರೆ.
ಜನವರಿ 25ರಂದು ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತೀಯ ಆಟಗಾರರು ಈಗಾಗಲೇ ಹೈದರಾಬಾದ್ನಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಒಂದು ದಿನದ ರಜೆ ಪಡೆದಿದ್ದಾರೆ ಮತ್ತು ಬಿಸಿಸಿಐ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಮುಂಬೈ ನಿವಾಸದಲ್ಲಿ ರಾಮಮಂದಿರ ಸಮಾರಂಭದ ಆಹ್ವಾನವನ್ನು ಸ್ವೀಕರಿಸಿದರು.
ಇದಕ್ಕೂ ಮುನ್ನ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಎಂಎಸ್ ಧೋನಿ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಆಹ್ವಾನ ನೀಡಲಾಗಿತ್ತು. ಮಾಜಿ ನಾಯಕ ಎಂಎಸ್ ಧೋನಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಹ-ಪ್ರಾಂತೀಯ ಕಾರ್ಯದರ್ಶಿ ಧನಂಜಯ್ ಸಿಂಗ್ ಅವರು ಆಹ್ವಾನ ನೀಡಿದ್ದರು.
ಭಾರತ ಹಾಗೂ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಅವರು ರಾಮಮಂದಿರ ಸಮಾರಂಭಕ್ಕಾಗಿ ಅಯೋಧ್ಯೆಗೆ ತಲುಪಿದ್ದಾರೆ.

ಇನ್ನು ಭಾರತದ ಮಾಜಿ ಆರಂಭಿಕ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಆಹ್ವಾನವನ್ನು ಸ್ವೀಕರಿಸುವ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "ಪ್ರಾಣ ಪ್ರತಿಷ್ಠಾಪನೆ ಆಹ್ವಾನವನ್ನು ತಂದೆ ಗೌರವದಿಂದ ಸ್ವೀಕರಿಸಿದರು! ಜೈ ಶ್ರೀ ರಾಮ್!," ಎಂದು ಗೌತಮ್ ಗಂಭೀರ್ ಬರೆದಿದ್ದಾರೆ.
ಭಾರತದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ತಂಡದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಸ್ಟಾರ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ, ಅವರ ಪತ್ನಿ ರಿವಾಬಾ ಗುಜರಾತ್ನಲ್ಲಿ ಹಾಲಿ ಬಿಜೆಪಿ ಶಾಸಕರಾಗಿದ್ದು, ಆಹ್ವಾನಿತ ವಿವಿಐಪಿಗಳಲ್ಲಿ ಸಹ ಸೇರಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸಹ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಲಾಗಿದೆ. ಭಾರತ ತಂಡದ ಮಾಜಿ ನಾಯಕರಾದ ಸೌರವ್ ಗಂಗೂಲಿ, ಕಪಿಲ್ ದೇವ್, ಸುನಿಲ್ ಗವಾಸ್ಕರ್ ಬಹು ನಿರೀಕ್ಷಿತ ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನೇರ ನುಡಿಗಳಿಂದ ಹೆಸರುವಾಸಿಯಾಗಿದ್ದು, ಅವರು ಸಹ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಪ್ರಾಣ-ಪ್ರತಿಷ್ಠಾಪನೆ ಸಮಾರಂಭದ ವೈದಿಕ ಆಚರಣೆಗಳು ಸೋಮವಾರದ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಯಿತು. ಜನವರಿ 23ರಿಂದ ಸಾರ್ವಜನಿಕರಿಗೆ ದರ್ಶನಕ್ಕಾಗಿ ದೇವಾಲಯವು ತೆರೆದಿರುತ್ತದೆ.