ಕರ್ನಾಟಕದ ಭರವಸೆಯ ಬೌಲರ್ಗಳ ಕರಾರುವಕ್ ದಾಳಿಯ ನೆರವಿನಿಂದ ರಣಜಿ ಟೂರ್ನಿ ಸಿ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.
ಅಹಮಾದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಮಾಡಲು ಮುಂದಾದರು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಗುಜರಾತ್ ತಂಡ 264 ರನ್ ಗಳಿಗೆ ಆಲೌಟ್ ಆಯಿತು.

ಕರ್ನಾಟಕದ ಬೌಲರ್ಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಸಫಲರಾದರು. ಭರವಸೆಯ ವೇಗದ ಬೌಲರ್ಗಳು ಸಮಯಕ್ಕೆ ತಕ್ಕಂತೆ ದಾಳಿ ಸಂಘಟಿಸಿದರು. ಅಲ್ಲದೆ ವಿಕೆಟ್ಗಳನ್ನು ಸಹ ಪಡೆದು ಮಿಂಚಿದರು. 45 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಆತಿಥೇಯ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ನಾಲ್ಕು ವಿಕೆಟ್ಗಳಲ್ಲಿ ಎರಡು ವಿಕೆಟ್ಗಳನ್ನು ವೈಶಾಖ್ ಪಡೆದರು.
ಐದನೇ ವಿಕೆಟ್ಗೆ ಕ್ಷತೀಜ್ ಪಟೇಲ್ ಹಾಗೂ ಉಮಂಗ್ ಕುಮಾರ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮಯಾಂಕ್ ಪಡೆ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಸೆಷನ್ ಬೈ ಸೆಷನ್ ಬ್ಯಾಟಿಂಗ್ ಮಾಡಿದ ಜೋಡಿ ತಂಡ ಸಾಧಾರಣ ಮೊತ್ತ ಕಲೆ ಹಾಕುವತ್ತ ನೆರವಾಯಿತು. ಐದನೇ ವಿಕೆಟ್ಗೆ ಕ್ಷತೀಜ್ ಪಟೇಲ್ ಹಾಗೂ ಉಮಂಗ್ ಕುಮಾರ್ 157 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕ್ಷತೀಜ್ ಪಟೇಲ್ 11 ಬೌಂಡರಿ ನೆರವಿನಿಂದ 95 ರನ್ ಬಾರಿಸಿ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಉಮಂಗ್ ಕುಮಾರ್ 12 ಬೌಂಡರಿ ಸಹಾಯದಿಂದ 72 ರನ್ ಸಿಡಿಸಿದರು.

ನಾಯಕ ಚಿಂತನ್ ಗಜ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 45 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದಂತೆ ಆರಂಭಿಕ ಪ್ರಿಯಾಂಕ್ ಪಾಂಚಾಲ್24 ರನ್ ಬಾರಿಸಿದರು. ಉಳಿದ ಬ್ಯಾಟ್ಸ್ಮನ್ಗಳು ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು.
ಉತ್ತಮ ಬೌಲಿಂಗ್ ನಿರ್ವಹಣೆ ಪ್ರದರ್ಶನ ನೀಡಿದ ವಾಸುಕಿ ಕೌಶಿಕ್ 49 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಡಿದ ಅನುಭವಿ ಹೊಂದಿರುವ ಪ್ರಸಿದ್ಧ ಕೃಷ್ಣ, ವಿಜಯಕುಮಾರ್ ವೈಶಾಖ್, ರೋಹಿತ್ ಕುಮಾರ್ ತಲಾ ಎರಡು ವಿಕೆಟ್ ಕಬಳಿಸಿದರು.
ಕರ್ನಾಟಕ ಎರಡನೇ ದಿನದ ಮೊದಲಾವಧಿಯಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿ, ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಪಡೆಯುವ ಪ್ಲ್ಯಾನ್ ಹಾಕಿಕೊಂಡಿದೆ.