
ವಡೋದರಾ, ಜನವರಿ 09: ರಣಜಿ ಟ್ರೋಫಿಯ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬರೋಡಾ ರೋಚಕ ಜಯ ದಾಖಲಿಸಿದೆ. ಆದರೆ, ಈ ಪಂದ್ಯದಲ್ಲಿ ಸೋತರೂ ಕರ್ನಾಟಕದ ಕ್ವಾರ್ಟರ್ ಫೈನಲ್ ಅರ್ಹತೆ ಕನಸು ಇನ್ನೂ ಜೀವಂತವಾಗಿದೆ.
ಎಂಟರ ಘಟ್ಟಕ್ಕೇರಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಬರೋಡ ತಂಡಕ್ಕೆ 110 ರನ್ ಗಳ ಗೆಲುವಿನ ಗುರಿಯನ್ನು ಕರ್ನಾಟಕ ನೀಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 112 ಸ್ಕೋರಿಗೆ ಆಲೌಟ್ ಆಗಿದ್ದ ಕರ್ನಾಟಕ ಎರಡನೇ ಇನ್ನಿಂಗ್ಸ್ ನಲ್ಲಿ 220 ಸ್ಕೋರ್ ಮಾಡಿತ್ತು.
ಮೊದಲ ಇನ್ನಿಂಗ್ಸ್ ನಲ್ಲಿ223 ಸ್ಕೋರ್ ಮಾಡಿದ್ದ ಬರೋಡಾದ ರನ್ ಚೇಸ್ ಉತ್ತಮವಾಗಿರಲಿಲ್ಲ. 10ರನ್ನಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದಲ್ಲದೆ, ನಿರಂತರವಾಗಿ ವಿಕೆಟ್ ಕಳೆದುಕೊಂಡು 73ಸ್ಕೋರಿಗೆ 5 ವಿಕೆಟ್ ಉದುರಿಸಿಕೊಂಡಿತ್ತು.
ವೇಗಿಗಳಾದ ಪ್ರಸಿದ್ಧ ಕೃಷ್ಣ 3, ರೋನಿತ್ ಮೋರೆ 2, ಸ್ಪಿನ್ನರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಕಿತ್ತು ಬರೋಡಾಕ್ಕೆ ಆತಂಕ ತಂದರು.
ಕರ್ನಾಟಕ 112 ಹಾಗೂ 220 ಆಲೌಟ್ (ಕೆ ಸಿದ್ದಾರ್ಥ್ 64, ಮನೀಶ್ ಪಾಂಡೆ 50, ಭಾರ್ಗವ್ ಭಟ್ 5/116, ದೀಪಕ್ ಹೂಡಾ 5/31)
ಬರೋಡಾ : 223 ಹಾಗೂ 110/8 (ಯೂಸುಫ್ ಪಠಾಣ್ 41, ಪ್ರಸಿದ್ಧ್ ಕೃಷ್ಣ 3/14, ರೋನಿತ್ ಮೋರೆ 2/57, ಶ್ರೇಯಸ್ ಗೋಪಾಲ್ 2/12)ಕರ್ನಾಟಕ ಈಗ ಬೇರೆ ತಂಡಗಳ ಫಲಿತಾಂಶದ ಮೇಲೆ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕಿದೆ. 8 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡು 27 ಅಂಕಗಳನ್ನು ಹೊಂದಿರುವ ಕರ್ನಾಟಕ ನಾಕೌಟ್ ಹಂತ ತಲುಪುವ ನಿರೀಕ್ಷೆಯಿದೆ. ಬರೋಡಾ ಹಾಗೂ ಗುಜರಾತ್ ತಲಾ 26 ಅಂಕಗಳನ್ನು ಹೊಂದಿವೆ. ಕರ್ನಾಟಕ ಈ ಪಂದ್ಯ ಸೋತಿದ್ದರಿಂದ ವಿದರ್ಭ(28 ಅಂಕಗಳು) ಹಾದಿ ಸುಗುಮವಾಗಿದೆ. ಸೌರಾಷ್ಟ್ರ(26) ವಿರುದ್ಧದ ಪಂದ್ಯ ಗೆದ್ದರೆ ಎ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಹಂತ ತಲುಪಲಿದೆ.