ಸೂರತ್, ಡಿಸೆಂಬರ್ 17: ರಣಜಿ ಎಲೈಟ್ 'ಎ' ಗುಂಪಿನ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವನ್ನು ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ಅಪೂರ್ವ ಅವಕಾಶವನ್ನು ಕರ್ನಾಟಕ ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 173 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿದ್ದರೂ, ಅದರ ಸದುಪಯೋಗ ಪಡಿಸಿಕೊಂಡು ಗುಜರಾತ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ ಬೌಲರ್ಗಳ ಗೆಲುವಿನ ಅವಕಾಶವನ್ನು ಕಳೆದುಕೊಂಡರು.
ನಾಲ್ಕನೆಯ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಸಿಡಿಲಬ್ಬರದ ಆಟವಾಡಿದ್ದರೂ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದು, ಅನಿವಾರ್ಯವಾಗಿ ಡ್ರಾದತ್ತ ಬ್ಯಾಟ್ಸ್ಮನ್ಗಳು ಮನಸ್ಸು ಮಾಡಬೇಕಾಯಿತು. ಇದರಿಂದ ಕರ್ನಾಟಕ ಮೂರು ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮೊದಲ ಇನ್ನಿಂಗ್ಸ್ಗೆ ಕೇವಲ 216 ರನ್ಗಳಿಗೆ ಆಲೌಟ್ ಆಗಿದ್ದ ಗುಜರಾತ್ ಎರಡನೆಯ ಇನ್ನಿಂಗ್ಸ್ನಲ್ಲಿ ದಿಟ್ಟ ಆಟವಾಡಿತು. ಆರಂಭಿಕ ಆಟಗಾರರಿಬ್ಬರೂ ಎರಡನೆಯ ಓವರ್ ವೇಳೆಗೇ ಪೆವಿಲಿಯನ್ ಹಾದಿ ಹಿಡಿದಿದ್ದರೂ, ಮಧ್ಯಮ ಕ್ರಮಾಂಕದ ಆಟಗಾರರು ಕರ್ನಾಟಕದ ಬೌಲರ್ಗಳನ್ನು ಕಾಡಿದರು.
ಪಂದ್ಯ ಉಳಿದಿಕೊಳ್ಳುವ ಗುರಿಯೊಂದಿಗೆ ರಾಜುಲ್ ಭಟ್ (91/255) ಮತ್ತು ಮನ್ಪ್ರೀತ್ ಜುನೇಜಾ (98/212) ನಿಧಾನಗತಿಯ ಆಟದ ಮೊರೆ ಹೋದರು. ಭಾರ್ಗವ್ ಮೆರಾಯ್ 130 ಎಸೆತಗಳಲ್ಲಿ 74 ರನ್ ಬಾರಿಸಿದರು.
ಕೊನೆಯಲ್ಲಿ ಬಾಲಂಗೋಚಿಗಳ ವಿಕೆಟ್ಗಳನ್ನು ಬೇಗನೆ ಕಿತ್ತರೂ, ಕಾಲ ಮಿಂಚಿ ಹೋಗಿತ್ತು.
ಗೆಲುವಿಗೆ 173 ರನ್ಗಳ ಗುರಿ ಬೆನ್ನತ್ತಿದ ಕರ್ನಾಟಕ ಎರಡನೆಯ ಓವರ್ನಲ್ಲಿಯೇ ದೇವತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ವೇಗದ ರನ್ ಗಳಿಗೆ ಮೂಲಕ ಗೆಲುವಿಗಾಗಿ ಮಯಾಂಕ್ ಅಗರವಾಲ್ ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. 57 ಎಸೆತಗಳಲ್ಲಿ 53 ರನ್ ಗಳಿಸಿದ್ದ ಮಯಾಂಕ್ ಔಟಾದ ಬಳಿಕ ಗೆಲುವಿನ ಹೋರಾಟದ ಸಣ್ಣ ಆಸೆಯೂ ಕಮರಿತು.
ಸಂಕ್ಷಿಪ್ತ ಸ್ಕೋರ್
ಗುಜರಾತ್: 216 ಮತ್ತು 345 (124.5) ರಾಜುಲ್ ಭಟ್ 91, ಮನ್ಪ್ರೀತ್ ಜುನೇಜಾ 98, ಭಾರ್ಗವ್ ಮೆರಾಯ್ 74, ಧ್ರುವ್ ರಾವಲ್ 30, ಕೆ. ಗೌತಮ್ 4/80, ರೋನಿತ್ ಮೋರೆ 4/61
ಕರ್ನಾಟಕ: 389 ಮತ್ತು 107/4 (27) ಮಯಾಂಕ್ ಅಗರವಾಲ್ 53, ರವಿಕುಮಾರ್ ಸಮರ್ಥ್ 33, ಅಕ್ಷರ್ ಪಟೇಲ್ 3/45
ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ ಮೂರು ಅಂಕ, ಗುಜರಾತ್ ಒಂದು ಅಂಕ.