
ಹಿಮಾಚಲ ಪ್ರದೇಶದ ವೇಗದ ಬೌಲರ್ ಸಿದ್ಧಾರ್ಥ್ ಶರ್ಮಾ ವಡೋದರಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಇತ್ತೀಚೆಗಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದ ಶರ್ಮಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸಿದ್ಧಾರ್ಥ್ ಶರ್ಮಾ ಬಹುಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದು ಕಳೆದ ಎರಡು ವಾರಗಳಿಂದ ಕೃತಕ ಉಸಿರಾಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಉಸಿರಾಟದ ಸಮಸ್ಯೆ ತೀವ್ರಗೊಂಡಿತ್ತು. ಹೀಗಾಗಿ ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು ಎಂದು ತಿಳಿದು ಬಂದಿದೆ. ಸಿದ್ಧಾರ್ಥ್ ಶರ್ಮಾ ಅವರ ಹುಟ್ಟೂರಾದ ಉನಾದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ರಣಜಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ತಂಡದ ಭಾಗವಾಗಿದ್ದ ಸಿದ್ಧಾರ್ಥ್ ಕಳೆದ ಡಿಸೆಂಬರ್ನಲ್ಲಿ ಬೆಂಗಾಲ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯ ಬಾರಿ ರಣಜಿಯಲ್ಲಿ ಆಡಿದ್ದರು. ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಸಿದ್ಧಾರ್ಥ್ ಐದು ವಿಕೆಟ್ಗಳ ಗೊಂಚಲು ಪಡೆದಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿಯೂ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದ ಸಿದ್ಧಾರ್ಥ್ ಎರಡು ವಿಕೆಟ್ ಪಡೆದಿದ್ದರು. ಈ ಮೂಲಕ ತಮ್ಮ ಅಂತಿಮ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದುಕೊಂಡಿದ್ದರು.
ಬೆಂಗಾಲ್ ವಿರುದ್ಧದ ಪಂದ್ಯದ ಬಳಿಕ ಈ ಪಂದ್ಯದ ಬಳಿಕ ಅನಾರೋಗ್ಯಕ್ಕೆ ಒಳದ ಸಿದ್ಧಾರ್ಥ್ ಶರ್ಮಾ ಆಸ್ಪತ್ರೆಗೆ ದಾಖಲಾದರು. ಹೀಗಾಗಿ ಹಿಮಾಚಲ ಪ್ರದೇಶದ ಮುಂದಿನ ಪಂದ್ಯ ಬರೋಡಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
ಈ ಬಗ್ಗೆ ಹಿಮಾಚಲ ಪ್ರದೇಶ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಅರುಣ್ ಧುಮಲ್ ಪ್ರತಿಕ್ರಿಯಿಸಿದ್ದಾರೆ. ಇದು ದುರದೃಷ್ಟಕರ ವಿಚಾರ. ಅವರು ಆರೋಗ್ಯವಾಗಿದ್ದು ರಣಜಿ ಟ್ರೋಫಿಯ ಮೊದಲ ಎರಡು ಪಂದ್ಯಗಳನ್ನು ಆಡಿದರು. ಬರೋಡಾ ವಿರುದ್ಧದ ಪಂದ್ಯದ ಮೊದಲು ಅವರು ಅನಾರೋಗ್ಯಕ್ಕೆ ತುತ್ತಾದರು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೆಲವು ಪರೀಕ್ಷೆಗಳ ನಂತರ ಅವರ ಕ್ರಿಯೇಟಿನೈನ್ ಮಟ್ಟವು ಹೆಚ್ಚಿರುವುದು ಕಂಡುಬಂದಿದೆ. ಇದು ಅವರ ಮೂತ್ರಪಿಂಡಗಳು ಹಾಗೂ ಇತರ ಅಂಗಗಳ ಮೇಲೆ ಪರಿಣಾಮ ಬೀರಿದೆ. ವೈದ್ಯರು ತಮ್ಮ ಪ್ರಯತ್ ನಡೆಸಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಅರುಣ್ ಧುಮಲ್ ಹೇಳಿಕೆ ನೀಡಿದ್ದಾರೆ.