ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಪಿಯ ಲೀಗ್ ಹಂತದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಶನಿವಾರ 3 ವಿಕೆಟ್ಗೆ 142 ರನ್ಗಳಿಂಗೆ ಆಟ ಮುಂದುವರಿಸಿದ ಕರ್ನಾಟಕ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 461 ರನ್ ಸಿಡಿಸಿದೆ. ಈ ಮೂಲಕ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 309 ರನ್ಗಳ ಮುನ್ನಡೆ ಸಾಧಿಸಿ ಮುನ್ನುಗುತ್ತಿದೆ. ಕರ್ನಾಟಕದ ಪರ ಶ್ರೀನಿವಾಸ್ ಶರತ್ ಅಜೇಯ 55, ವಿಜಯಕುಮಾರ್ ವೈಶಾಕ್ ಅಜೇಯ 15 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪಂಜಾಬ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 152 ರನ್ ಗಳಿಗೆ ಆಲೌಟ್ ಆಗಿತ್ತು.
ಕರ್ನಾಟಕದ ಪರ ಎರಡನೇ ದಿನದಾಟವನ್ನು ಆರಂಭಿಸಿದ ದೇವದತ್ ಪಡಿಕ್ಕಲ್ ಹಾಗೂ ಅನುಭವಿ ಮನೀಷ್ ಪಾಂಡೆ ಅಬ್ಬರಿಸಿದರು. ಸ್ಟಾರ್ ಆಟಗಾರರು ತಮ್ಮ ನೈಜ ಆಟವಾಡಿದರು. ಸೆಷನ್ ಬೈ ಸೆಷನ್ ಪಂದ್ಯದ ಮೇಲೆ ಹಿಡಿತ ಬಿಗಿ ಗೊಳಿಸುತ್ತಾ ಸಾಗಿದ ಪ್ಲೇಯರ್ಸ್ ತಂಡಕ್ಕೆ ನೆರವಾದರು. 110 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಈ ಜೋಡಿ ಆಸರೆ ಆಯಿತು.
ಈ ಜೋಡಿ ಪಂಜಾಬ್ ತಂಡದ ರಣತಂತ್ರವನ್ನೇ ಬುಡಮೇಲು ಮಾಡಿತು. ತಮ್ಮ ನೈಜ ಆಟ ಆಡಿದ ಜೋಡಿ ನೆರೆದ ಪ್ರೇಕ್ಷಕರನ್ನು ರಂಜಿಸಿತು. ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ದ್ವಿಶತಕದ ಅಂಚಿನಲ್ಲಿ ಔಟ್ ಆದರು. ಪಡಿಕ್ಕಲ್ 216 ಎಸೆತಗಳಲ್ಲಿ 24 ಬೌಂಡರಿ, 4 ಸಿಕ್ಸರ್ ಸಹಾಯದಿಂದ 193 ರನ್ ಬಾರಿಸಿ ಔಟ್ ಆದರು.
ದೇವದತ್ ಔಟ್ ಆಗುತ್ತಿದ್ದಂತೆ ಜವಾಬ್ದಾರಿಯುತ ಬ್ಯಾಟ್ ಮಾಡಿದ ಮನೀಷ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಅನಾವರಣ ಮಾಡಿದರು. ಇವರು ಸಹ ಪ್ರಸಕ್ತ ಸಾಲಿನ ಮೊದಲ ರಣಜಿ ಟೂರ್ನಿಯಲ್ಲಿ ಶತಕದ ನಗೆ ಬೀರಿದರು. ಮನೀಷ್ 165 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಹಾಯದಿಂದ 118 ರನ್ ಸಿಡಿಸಿ ತಂಡಕ್ಕೆ ನೆರವಾದರು.
ನಾಲ್ಕನೇ ವಿಕೆಟ್ಗೆ 234 ರನ್ ಸೇರಿಸಿದ ಜೋಡಿ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಭಾರಿ ಮುನ್ನಡೆ ಸಾಧಿಸಲು ನೆರವಾಯಿತು.