ಇಂದೋರ್: ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಣ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯ ತಂಡ ದಿನದ ಗೌರವಕ್ಕೆ ಪಾತ್ರವಾಗಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಮಧ್ಯ ಪ್ರದೇಶ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 232 ರನ್ ಸೇರಿಸಿದೆ. ಅನುಭವಿ ಹರ್ಪೀತ್ ಸಿಂಗ್ (ಅಜೇಯ 75) ಹಾಗೂ ವೆಂಕಟೇಶ್ ಅಯ್ಯರ್ (ಅಜೇಯ 25) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಆರಂಭದಲ್ಲಿ ಬೌಲರ್ಗಳು ಸಮರ್ಥಿಸಿಕೊಂಡರು. ಮಧ್ಯ ಪ್ರದೇಶ ತಂಡದ ಸ್ಟಾರ್ ಟಾಪ್ ಆರ್ಡರ್ ಬ್ಯಾಟರ್ಗಳಾದ ಯಶ್ ದುಬೆ (20), ಹಿಮಾಂಶು ಮಂತ್ರಿ (0), ಸುಭ್ರಾಂಶು ಸೇನಾಪತಿ (28) ರನ್ ಕಲೆ ಹಾಕುವಲ್ಲಿ ವಿಫಲರಾದರು. ಶುಭಂ ಶರ್ಮಾ ಸ್ಥಿರವಾಗಿ ಆಡುತ್ತಿದ್ದಾಗ ರಿಟೈರ್ಡ್ ಹರ್ಟ್ ಆದರು.
ಶುಭಂ ಶರ್ಮಾ, ರಜತ್ ಪಟೀದಾರ್ ಜತೆಗೂಡಿ ನಾಲ್ಕನೇ ವಿಕೆಟ್ಗೆ ಹರ್ಪೀತ್ ಸಿಂಗ್ ಶತಕದ ಜೊತೆಯಾಟವನ್ನು ನೀಡಿದರು. ಭರವಸೆಯ ಆಟಗಾರ ರಜತ್ ಪಟೀದಾರ್ 3 ಬೌಂಡರಿ ನೆರವಿನಿಂದ 31 ರನ್ ಬಾರಿಸಿ ಔಟ್ ಆದರು.
ಐದನೇ ವಿಕೆಟ್ಗೆ ಹರ್ಪೀತ್ ಸಿಂಗ್ ಮತ್ತು ವೆಂಕಟೇಶ್ ಅಯ್ಯರ್ ಜೊತೆಗೂಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಇವರನ್ನು ಕಟ್ಟಿ ಹಾಕುವಲ್ಲಿ ಕರ್ನಾಟದ ಬೌಲರ್ಗಳು ವಿಫಲರಾದರು. ಹರ್ಪೀತ್ ಸಿಂಗ್ 8 ಬೌಂಡರಿ ಸೇರಿದಂತೆ ಅಜೇಯ 75 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ವೆಂಕಟೇಶ್ ಅಯ್ಯರ್ ಸಹ ಕರ್ನಾಟಕದ ಬೌಲರ್ಗಳನ್ನು ಕಾಡುತ್ತಿದ್ದಾರೆ.
ಕರ್ನಾಟಕದ ಪರ ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣ, ವಿಜಯಕುಮಾರ್ ವೈಶಾಖ್, ಹಾರ್ದಿಕ್ ರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಸೇರುವ ಕನಸು ಕಾಣುತ್ತಿರುವ ಚೇತೇಶ್ವರ್ ಪೂಜಾರ ರಣಜಿ ಟ್ರೋಫಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಸೌರಾಷ್ಟ್ರ ಹಾಗೂ ತಮಿಳು ನಾಡು ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ 203 ರನ್ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಪರ ಬ್ಯಾಟ್ ಮಾಡಿದ ಚೇತೇಶ್ವರ್ ಪೂಜಾರ 16 ರನ್ ಬಾರಿಸಿ ನಿರಾಸೆ ಅನುಭವಿಸಿದರು.
ಇನ್ನೊಂದು ಪಂದ್ಯದಲ್ಲಿ ಜಮ್ಮು ಕಾಶ್ಮೀರ್ ಹಾಗೂ ಮಹಾರಾಷ್ಟ್ರ ತಂಡಗಳು ಶ್ರೀನಗರ ಅಂಗಳದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಮ್ಮು ಕಾಶ್ಮೀರ್ ಮೊದಲು ಬ್ಯಾಟ್ ಮಾಡಿ ದಿನದಾಟದಂತ್ಯಕ್ಕೆ 5 ವಿಕೆಟ್ಗೆ 264 ರನ್ ಸೇರಿಸಿದೆ. ಜಮ್ಮು ಪರ ಶುಭಂ ಖಜುರಿಯಾ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 200 ಎಸೆತಗಳಲ್ಲಿ 18 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 130 ರನ್ ಸಿಡಿಸಿ ತಂಡಕ್ಕೆ ನೆರವಾದರು.