
ಬೆಂಗಳೂರು, ಜನವರಿ 18: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 18) ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್-3 ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನದ ಎದುರು 6 ವಿಕೆಟ್ ಗೆಲುವನ್ನಾಚರಿಸಿದೆ. ಈ ಜಯದೊಂದಿಗೆ ರಾಜ್ಯ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ.
ಕರ್ನಾಟಕದ ಮೊದಲ ಇನ್ನಿಂಗ್ಸ್ನಲ್ಲಿ ವಿನಯ್ ಕುಮಾರ್ ಅಜೇಯ ಅರ್ಧಶತಕ ( 83 ರನ್) ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ 52 ರನ್ ನೆರವಾದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಕರುಣ್ ನಾಯರ್ 61 ರನ್ ಮತ್ತು ನಾಯಕ ಮನೀಶ್ ಪಾಂಡೆ 87 ರನ್ ಬೆಂಬಲ ತಂಡಕ್ಕೆ ಗೆಲುವು ತಂದಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ರಾಜೇಶ್ ಬಿಷ್ನೋಯಿ 79, ನಾಯಕ ಮಹಿಪಾಲ್ ಲಾಮ್ರರ್ 50 ರನ್ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 224 ರನ್ ಪೇರಿಸಿತ್ತು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ನೊಂದಿಗೆ 39 ರನ್ ಮುನ್ನಡೆ ಸಾಧಿಸಿತ್ತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ರಾಜಸ್ತಾನದ ರನ್ ಮತ್ತೆ ಕುಸಿತ ಕಂಡಿತು. ಪ್ರವಾಸಿ ರಾಜಸ್ತಾನ 222 ರನ್ ಗಳಿಸಲಷ್ಟೇ ಶಕ್ತವಾಯ್ತು. ಕರ್ನಾಟಕ ತಂಡ ಅಂತಿಮ ಇನ್ನಿಂಗ್ಸ್ನಲ್ಲಿ 47.5 ಓವರ್ಗೆ 185 ರನ್ ಪೇರಿಸಿ ಗೆಲುವಿನ ಸಂಭ್ರಮಾಚರಿಸಿತು. ಕರ್ನಾಟಕದ ವಿಜಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯದಲ್ಲಿ ಕೃಷ್ಣಪ್ಪ ಗೌತಮ್ 3+4, ಅಭಿಮನ್ಯು ಮಿಥುನ್ 3+2, ಶ್ರೇಯಸ್ ಗೋಪಾಲ್ 2+3 ವಿಕೆಟ್ ಪಡೆಯುವ ಮೂಲಕ ರಾಜ್ಯ ತಂಡದ ಪರ ಮಿಂಚಿದರು. ಎದುರಾಳಿ ಪರ ರಾಹುಲ್ ಚಾಹರ್ ಕರ್ನಾಟಕದ ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 5 ವಿಕೆಟ್ ಉರುಳಿಸಿ ಗಮನ ಸೆಳೆದರು.