ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ, ಆತಿಥೇಯ ಮುಂಬೈ ಸೊಗಸಾದ ಪ್ರದರ್ಶನ ನೀಡಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ವಿದರ್ಭ ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗೆ 248 ರನ್ ಸೇರಿಸಿದ್ದು, 290 ರನ್ಗಳ ಹಿನ್ನಡೆ ಅನುಭವಿಸುತ್ತಿದೆ.
ದೇಶೀಯ ಟೂರ್ನಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಮುಂಬೈ 42ನೇ ಬಾರಿ ಟ್ರೋಫಿ ಎತ್ತುವ ಸನಿಹದಲ್ಲಿದೆ. ಗುರುವಾರ ಈ ಆಸೆ ನೆರವೇರಬಹುದಾಗಿದೆ. ನಾಲ್ಕನೇ ದಿನದಾಟವನ್ನು ವಿಕೆಟ್ ನಷ್ಟವಿಲ್ಲದೆ 10 ರನ್ಗಳಿಂದ ಆರಂಭಿಸಿದ ವಿದರ್ಭ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

ವಿದರ್ಭ ಪರ ಆರಂಭಿಕರಾದ ಅಥರ್ವ್ ಹಾಗೂ ಧ್ರುವ್ ಶೋರೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 18.5 ಓವರ್ಗಳಲ್ಲಿ 64 ರನ್ ಸೇರಿಸಿತು. ಅಥರ್ವ್ 32 ಹಾಗೂ ಧ್ರುವ್ 28 ರನ್ ಬಾರಿಸಿ ಔಟ್ ಆದರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಅಮನ್ ಮೊಖಂಡೆ 32 ರನ್ ಗಳಿಗೆ ಆಟ ಮುಗಿಸಿದರು. ಯಶ್ ರಾಥೋಡ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

ಐದನೇ ವಿಕೆಟ್ಗೆ ಕರುಣ್ ನಾಯರ್ ಹಾಗೂ ಅಕ್ಷಯ್ ವಾಡ್ಕರ್ ಜೊತೆಗೂಡಿ 28.3 ಓವರ್ ಬ್ಯಾಟ್ ಮಾಡಿ ವಿಕೆಟ್ ಬೀಳದಂತೆ ನೋಡಿಕೊಂಡರು. ಈ ಇಬ್ಬರು ಬ್ಯಾಟರ್ಗಳು ಬ್ಯಾಟ್ ಮಾಡುತ್ತಿದ್ದಾಗ ವಿದರ್ಭ ಹೊಸ ಉತ್ಸಾಹದಲ್ಲಿತ್ತು. ಆದರೆ ಮುಶೀರ್ ಖಾನ್ ಇವರ ಉತ್ಸಾಹಕ್ಕೆ ಬ್ರೇಕ್ ಹಾಕಿದರು.
220 ಎಸೆತಗಳನ್ನು ಎದುರಿಸಿ 74 ರನ್ ಬಾರಿಸಿದ್ದ ಮಿಡ್ಲ್ ಆರ್ಡರ್ ಬ್ಯಾಟರ್ ಕರುಣ್ ನಾಯರ್ಗೆ ಮುಶೀರ್ ಖೆಡ್ಡಾ ತೋಡಿದರು. ಇಲ್ಲಿಂದ ಮುಂಬೈ ಗೆಲುವು ಮತ್ತಷ್ಟು ಹತ್ತಿರವಾಯಿತು.
ಐದನೇ ದಿನಕ್ಕೆ ಹರ್ಷಾ ದುಬೆ (ಅಜೇಯ 11) ಹಾಗೂ ಅಕ್ಷಯ್ ವಾಡ್ಕರ್ (ಅಜೇಯ 56) ಕ್ರೀಸ್ ಕಾಯ್ದುಕೊಂಡಿದ್ದಾರೆ. ವಿದರ್ಭ ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಕಷ್ಟ. ಮುಂಬೈ ಈಗಾಗಲೇ ರಣಜಿ ಟ್ರೋಫಿ ಮೇಲೆ ಕೈ ಇಟ್ಟಂತೆ ಕಾಣುತ್ತಿದೆ.