
ಕೊಲ್ಕತ್ತಾ: ಅದ್ಭುತ ಫಾರ್ಮ್ನಲ್ಲಿರುವ ಕರ್ನಾಟಕ ತಂಡ ಈ ಬಾರಿಯ ರಣಜಿಯಲ್ಲಿ ಸೆಮಿಫೈನಲ್ಗೆ ಏರುವಲ್ಲಿ ಯಶಸ್ವಿಯಾಗಿದೆ. ನಾಳೆ ರಣಜಿಯ ಸೆಮಿಫೈನಲ್ ಪಂದ್ಯ ಆರಂಭವಾಗಲಿದ್ದು ಪಶ್ಚಿಮ ಬಂಗಾಳ ತಂಡ ಕರ್ನಾಟಕದ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ ಈ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದೆ.
ನಾಳಿನ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಕೆ.ಎಲ್ ರಾಹುಲ್ ಕಣಕ್ಕಿಳಿಯುತ್ತಿರುವುದು ಕರ್ನಾಟಕ ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇಂದು ಅಭ್ಯಾಸದಲ್ಲಿ ಕೆ.ಎಲ್ ರಾಹುಲ್ ಕೂಡ ಪಾಲ್ಗೊಂಡಿದ್ದು ಭರ್ಜರಿಯಾಗಿ ತಾಲೀಮು ನಡೆಸಿದ್ದಾರೆ.
ಇಂದು ಕರ್ನಾಟಕ ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ನಾಳೆಯಿಂದ ಆರಂಭವಾಗುವ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಸದೆಬಡಿಯಲು ಕರ್ನಾಟಕ ಹುಡುಗರು ಸಿದ್ಧರಾಗಿದ್ದಾರೆ. ಸತತ ಮೂರನೇ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿದ ಸಾಧನೆಯನ್ನು ಕರ್ನಾಟಕ ಮಾಡಿದೆ.
ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ಜಮ್ಮು ಕಾಶ್ಮೀರ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಕರ್ನಾಟಕವನ್ನು ಮೊದಲ ಇನ್ನಿಂಗ್ಸ್ನಲ್ಲಿ 202 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಜಮ್ಮು ಕಾಶ್ವೀರ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬೌಲಿಂಗ್ ಮೂಲಕ ಹಿನ್ನಡೆ ಅನುಭವಿಸುವಂತೆ ಮಾಡಿತು.
ಬಳಿಕ ಎರಡು ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕರ್ನಾಟಕ ಎರಡನೇ ಇನ್ನಿಂಗ್ಸ್ನಲ್ಲೂ ಜಮ್ಮು ಕಾಶ್ಮೀರ ತಂಡವನ್ನು ಬೇಗನೆ ಕಟ್ಟಿಹಾಕಿ ಗೆದ್ದು ಬೀಗಿತು. ಈ ಮೂಲಕ ಕರ್ನಾಟಕ ತಂಡ ಸೆಮಿ ಫೈನಲ್ ಪ್ರವೇಶವನ್ನು ಗಿಟ್ಟಿಸಿಕೊಂಡಿದೆ. ಶನಿವಾರ ಆರಂಭವಾಗಲಿರುವ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಫೈನಲ್ಗೇರಲು ಕರ್ನಾಟಕ ಆಟಗಾರರು ರಣತಂತ್ರ ಹೆಣೆದಿದ್ದಾರೆ.