ಲಕ್ನೋ: ನಾಯಕ ದೇವದತ್ ಪಡಿಕ್ಕಲ್ ಬಾರಿಸಿದ ದ್ವಿಶತಕ ಹಾಗೂ ಆರ್ ಸ್ಮರಣ್ ಸಿಡಿಸಿದ ಶತಕದ ನೆರವಿನಿಂದ ಕರ್ನಾಟಕ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ ವಿರುದ್ದ ಸವಾಲಿನ ಮೊತ್ತವನ್ನು ಕಲೆ ಹಾಕಿದೆ.
ಸೋಮವಾರ ದಿನದಾಟವನ್ನು ಕರ್ನಾಟಕ 2 ವಿಕೆಟ್ಗೆ 355 ರನ್ಗಳಿಂದ ಆಟ ಮುಂದುವರೆಸಿತು. ಮೂರನೇ ವಿಕೆಟ್ಗೆ ನಾಯಕ ದೇವದತ್ ಪಡಿಕ್ಕಲ್ ಹಾಗೂ ಭರವಸೆಯ ಆಟಗಾರ ಕರುಣ್ ನಾಯರ್ ಜೋಡಿ ಮನಮೋಹಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 183 ಎಸೆತಗಳಲ್ಲಿ 129 ರನ್ ಸೇರಿಸಿತು. ಈ ಹಂತದಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿ ಔಟ್ ಆದರು.

ನಾಯಕ ದೇವದತ್ ಪಡಿಕ್ಕಲ್ ತಮ್ಮ ನೈಜ ಆಟವನ್ನು ಮುಂದುವರೆಸಿದರು. ಇವರು ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ದೇವದತ್ ನಾಯಕತ್ವದ ಜವಾಬ್ದಾರಿ ಅರಿತು ಬ್ಯಾಟ್ ಮಾಡಿದರು. ಇವರು ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ದೊಡ್ಡ ಮೊತ್ತವನ್ನು ಕಲೆ ಹಾಕುವತ್ತ ದೃಷ್ಟಿ ನೆಡುವಂತೆ ಮಾಡಿದರು. ಇವರು 230 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್ ಸಹಾಯದಿಂದ 232 ರನ್ ಬಾರಿಸಿ ಆರ್ಭಟಿಸಿದರು. ತಂಡದ ಮೊತ್ತ 484 ರನ್ ಆಗಿತ್ತು. ದೇವದತ್ ಔಟ್ ಆದರು. ಆಲ್ರೌಂಡರ್ ಶ್ರೇಯಸ್ ಗೋಪಾಲ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು.
6ನೇ ವಿಕೆಟ್ಗೆ ಸ್ಮರಣ್ ಹಾಗೂ ಕೃತಿಕ್ ಕೃಷ್ಣ ಜೋಡಿ ಸ್ಥಿರ ಪ್ರದರ್ಶನ ನೀಡಿತು. ಈ ಜೋಡಿ 184 ಎಸೆತಗಳಲ್ಲಿ 123 ರನ್ ಸೇರಿಸಿತು. ಕೃತಿಕ್ ಕೃಷ್ಣ 60 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆರ್ ಸ್ಮರಣ್ 191 ಎಸೆತಗಳಲ್ಲಿ 11 ಬೌಂಡರಿ ಸಹಾಯದಿಂದ ಅಜೇಯ 121 ರನ್ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಕರ್ನಾಟಕ ಎರಡನೇ ದಿನದಾಟದ ಮುಕ್ತಾಯಕ್ಕೆ 180 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 689 ರನ್ ಸೇರಿಸಿತು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ಎರಡನೇ ದಿನದಾಟದಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ಎರಡನೇ ದಿನದಾಟವನ್ನು 5 ವಿಕೆಟ್ಗೆ 249 ರನ್ಗಳಿಂದ ಆಟ ಮುಂದುವರೆಸಿತು. ಬಂಗಾಳ ಪರ ಸುದೀಪ್ ಕುಮಾರ್ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಇವರು 246 ಎಸೆತಗಳಲ್ಲಿ 21 ಬೌಂಡರಿ, 1 ಸಿಕ್ಸರ್ ಸಹಾಯದಿಂದ 146 ರನ್ ಬಾರಿಸಿದರು. ಬಂಗಾಳ ತಂಡದ ಪರ ಸುಮಂತ್ ಗುಪ್ತಾ 39 ರನ್ ಸಿಡಿಸಿದರು. ಅಂತಿಮವಾಗಿ ಬಂಗಾಳ 328 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ ಆರಂಭಿಸಿದ ಜಮ್ಮು ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 13 ರನ್ ಆಗಿದ್ದಾಗ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪರಾಸ್ ಡೋಗ್ರಾ ಮತ್ತು ಅಬ್ದುಲ್ ಸಮದ್ ಜೋಡಿ ನಾಲ್ಕನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿತು. ಪರಾಸ್ ಡೋಗ್ರಾ 58 ರನ್ ಬಾರಿಸಿ ಔಟ್ ಆದರು. ಅಬ್ದುಲ್ ಸಮದ್ 12 ಬೌಂಡರಿ ಸಹಾಯದಿಂದ 82 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಜಮ್ಮು 51 ಓವರ್ಗಳಲ್ಲಿ 5 ವಿಕೆಟ್ಗೆ 198 ರನ್ ಕಲೆ ಹಾಕಿತು. ಇನಿಂಗ್ಸ್ ಮುನ್ನಡೆ ಸಾಧಿಸಲು ಜಮ್ಮುಗೆ ಇನ್ನು 130 ರನ್ ಅವಶ್ಯಕತೆ ಇದೆ. ಬಂಗಾಳ ತಂಡದ ಪರ ಶಮಿ ಮೂರು ವಿಕೆಟ್ ಪಡೆದರು.