
ಮೈಸೂರು, ಡಿಸೆಂಬರ್ 1: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 1) ಮುಕ್ತಾಯಗೊಂಡ ಎಲೈಟ್ ಗ್ರೂಪ್ 'ಎ' ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರಕ್ಕೆ 7 ವಿಕೆಟ್ ಸೋಲುಣಿಸಿದೆ. ದೇವದತ್ ಪಡಿಕಳ್ ಮತ್ತು ದೇಗಾ ನಿಶ್ಚಲ್ ಅರ್ಧಶತಕ ನೆರವಿನಿಂದ ಕರ್ನಾಟಕ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಮಹಾರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ರುತುರಾಜ್ ಗಾಯಕ್ವಾಡ್ 39, ರೋಹಿತ್ ಮೋಟ್ವಾನಿ 34 ರನ್ ನೆರವಿನಿಂದ 39.4 ಓವರ್ ಗೆ 113 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತು. ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕದ ಜಗದೀಶ್ ಸುಚಿತ್ 4, ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರೋನಿತ್ ಮೋರೆ ತಲಾ 2 ವಿಕೆಟ್ ಕೆಡವಿ ಕಾಡಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ನಿಶ್ಚಲ್ 39, ಶ್ರೇಯಸ್ ಗೋಪಾಲ್ 40 ರನ್ ಬೆಂಬಲದಿಂದ 84.2 ಓವರ್ ಗೆ ಎಲ್ಲಾ ವಿಕೆಟ್ ಕಳೆದು 186 ರನ್ ಪೇರಿಸಿತು. ಈ ವೇಳೆ ಸತ್ಯಜಿತ್ 3 ವಿಕೆಟ್ ಕೆಡವಿ ಮಹಾರಾಷ್ಟ್ರ ತಂಡದ ಪರ ಮಿಂಚಿದರು.
ಮಹಾರಾಷ್ಟ್ರ ದ್ವಿತೀಯ ಇನ್ನಿಂಗ್ಸ್ ವೇಳೆ ರುತುರಾಜ್ ಮತ್ತು ನೌಶದ್ ಶೈಕ್ ಕೊಂಚ ಅಬ್ಬರದ ಬ್ಯಾಟಿಂಗ್ ನಡೆಸಿದರು. ರುತುರಾಜ್ 89, ನೌಶದ್ 73 ರನ್ ಪೇರಿಸಿದ್ದರಿಂದ ಮರಾಠ ತಂಡ 97 ಓವರ್ಗೆ ಎಲ್ಲಾ ವಿಕೆಟ್ ಕಳೆದು 256 ರನ್ ಸೇರಿಸಿತ್ತು.
ಅಂತಿಮ ಇನ್ನಿಂಗ್ಸ್ ಗೆ ಇಳಿದ ಕರ್ನಾಟಕ ತಂಡಕ್ಕೆ ದೇವದತ್ ಮತ್ತು ನಿಶ್ಚಲ್ ಅರ್ಧಶತಕ ರನ್ ನೆರವು ದೊರೆಯಿತು. ದೇವದತ್ 77, ನಿಶ್ಚಲ್ 61, ಮೀರ್ ಕೌನೈನ್ ಅಬ್ಬಾಸ್ 34 ರನ್ ಸೇರಿಸಿದ್ದರಿಂದ ರಾಜ್ಯ ತಂಡ 70.2 ಓವರ್ಗೆ 3 ವಿಕೆಟ್ ಕಳೆದು 184 ರನ್ ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು.