
ರಾಜ್ಕೋಟ್, ಡಿಸೆಂಬರ್ 7: ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಐದನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೊದಲ ಇನ್ನಿಂಗ್ಸ್ಗೆ ಇಳಿದಿರುವ ಆತಿಥೇಯ ಸೌರಾಷ್ಟ್ರ ತಂಡ 91 ಓವರ್ನಲ್ಲಿ 9 ವಿಕೆಟ್ ಕಳೆದು 288 ರನ್ ಪೇರಿಸಿದೆ. ಕ್ರಿಕೆಟ್ಗೆ ವಿದಾಯ ಘೋಷಿಸಿ ಅಂತಿಮ ಪಂದ್ಯವಾಡುತ್ತಿರುವ ಸೌರಾಷ್ಟ್ರ ನಾಯಕ ಜಯದೇವ್ ಶಾ ಅವರ 97 ರನ್ ನೆರವಿನಿಂದ ತಂಡ ಚೇತರಿಕೆ ಕಂಡಿತು. (ಚಿತ್ರ ಕೃಪೆ: ಬಿಸಿಸಿಐ)
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಸೌರಾಷ್ಟ್ರಕ್ಕೆ ನಾಯಕ ಜಯದೇವ್ ಉತ್ತಮ ರನ್ ಕೊಡುಗೆ ನೀಡಿದರು. ಶಾ ಒಟ್ಟು 97 ರನ್ ಸೇರಿಸಿದರು. ಇನ್ನು ಆರಂಭಿಕ ಆಟಗಾರರಾದ ಹಾರ್ವಿಕ್ ದೇಸಾಯಿ 26, ಸ್ನೆಲ್ ಪಾಟೆಲ್ 22, ಅರ್ಪಿತ್ ವಿ 38, ಪ್ರೇರಕ್ ಮಂಕಾದ್ 37, ಕಮಲೇಶ್ ಎಂ 31 ರನ್ ನೆರವಿನೊಂದಿಗೆ ಸೌರಾಷ್ಟ್ರ ಸಾಧಾರಣ ಮೊತ್ತ ಪೇರಿಸಿತು.
ಸೌರಾಷ್ಟ್ರ ಇನ್ನಿಂಗ್ಸ್ ವೇಳೆ ಕರ್ನಾಟಕದ ಜಗದೀಶ್ ಸುಚಿತ್ ಮತ್ತು ಪವನ್ ದೇಶಪಾಂಡೆ ಮಾರಕ ದಾಳಿ ನಡೆಸಿದ್ದು, ಎದುರಾಳಿಯ ರನ್ ಕದಿಯುವಿಕೆಗೆ ಬ್ರೇಕ್ ಹಾಕಿತು. ಸುಚಿತ್ ಭರ್ಜರಿ 5 ವಿಕೆಟ್, ಪವನ್ 3 ವಿಕೆಟ್ ಕಿತ್ತು ಸೌರಾಷ್ಟ್ರವನ್ನು ಕಾಡಿದರು. ಕಮಲೇಶ್ ಮತ್ತು ಯುವರಾಜ್ ಚೌಡಸ್ಯಾಮ ಕ್ರೀಸ್ನಲ್ಲಿದ್ದಾರೆ.
ಬುಧವಾರ (ಡಿಸೆಂಬರ್ 5ಕ್ಕೆ) ಜಯದೇವ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. 115 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಾಡಿರುವ ಶಾ ಅವರು 4,927 ರನ್, ಲಿಸ್ಟ್ 'ಎ'ಯ 60 ಪಂದ್ಯಗಳಲ್ಲಿ 1,234 ರನ್ ಮತ್ತು 36 ಟಿ20 ಪಂದ್ಯಗಳಲ್ಲಿ 551 ರನ್ ಸಾಧನೆ ಹೊಂದಿದ್ದಾರೆ.