
ನಾಗ್ಪುರ, ನವೆಂಬರ್ 14: ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ವಿದರ್ಭ-ಕರ್ನಾಟಕ ಮುಖಾಮುಖಿಯಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 71 ರನ್ ಮುನ್ನಡೆ ಸಾಧಿಸಿದೆ. ಕರ್ನಾಟಕ ಪರ ದೇಗಾ ನಿಶ್ಚಲ್ ಮತ್ತು ಶರತ್ ಬಿಆರ್ ಶತಕದಾಟ ತಂಡಕ್ಕೆ ಮುನ್ನಡೆ ತಂದಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆತಿಥೇಯ ವಿದರ್ಭ ಮೊದಲ ಇನ್ನಿಂಗ್ಸ್ ನಲ್ಲಿ 102.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 307 ರನ್ ಪೇರಿಸಿತ್ತು. ವಿದರ್ಭ ಪರ ಗಣೇಶ್ ಸತೀಶ್ 57, ವಾಸಿಮ್ ಜಾಫರ್ 41, ಶ್ರೀಕಾಂತ್ ವಾಘ್ 57 ರನ್ ಸೇರಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು.
ಪ್ರಥಮ ಇನ್ನಿಂಗ್ಸ್ ಗೆ ಇಳಿದ ಕರ್ನಾಟಕ ರವಿ ಕುಮಾರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಕರುಣ್ ನಾಯರ್ ವಿಕೆಟ್ ಕಳೆದು ಇನ್ನಿಂಗ್ಸ್ ಹಿನ್ನಡೆಯ ಭೀತಿ ಅನುಭವಿಸಿತು. ಆದರೆ ನಿಶ್ಚಲ್ ಮತ್ತು ಶರತ್ ತಂಡದ ಬೆಂಬಲಕ್ಕೆ ನಿಂತರು. ನಿಶ್ಚಲ್ 113, ಶರತ್ 103 ರನ್ ಪೇರಿಸಿದ್ದರು.
ನಿಶ್ಚಲ್, ಶರತ್ ಬಿಟ್ಟರೆ ನಾಯಕ ವಿನಯ್ ಕುಮಾರ್ 39 ರನ್ ಸೇರಿಸಿದ್ದೇ ದೊಡ್ಡ ರನ್ ಎನಿಸಿತು. ಕರ್ನಾಟಕ 134 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 378 ರನ್ ಗಳಿಸಿತು. ಬುಧವಾರ (ನವೆಂಬರ್ 14) ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ವಿದರ್ಭ ದಿನದಾಂತ್ಯಕ್ಕೆ 28 ಓವರ್ ಗೆ 2 ವಿಕೆಟ್ ಕಳೆದು 72 ರನ್ ಪೇರಿಸಿದೆ.