
ರಾಜ್ಕೋಟ್, ಡಿಸೆಂಬರ್ 8: ಗುಜರಾತ್ನ ರಾಜ್ಕೋಟ್ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ (ಡಿಸೆಂಬರ್ 8) ನಡೆದ ರಣಜಿ ಟ್ರೋಫಿ ಎಲೈಟ್ ಗ್ರೂಪ್ 'ಎ'ಯ 5ನೇ ಸುತ್ತಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಕರ್ನಾಟಕ 87 ರನ್ ಸೋಲನುಭವಿಸಿದೆ. ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಸೌರಾಷ್ಟ್ರ ನಾಯಕ ಜಯದೇವ್ ಶಾಗೆ ಗೆಲುವಿನ ವಿದಾಯ ದೊರೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಸೌರಾಷ್ಟ್ರಕ್ಕೆ ನಾಯಕ ಜಯದೇವ್ ಉತ್ತಮ ರನ್ ಕೊಡುಗೆ ನೀಡಿದರು. ಶಾ ಒಟ್ಟು 97 ರನ್ ಸೇರಿಸಿದರು. ಕ್ರಿಕೆಟ್ಗೆ ವಿದಾಯ ಹೇಳಿರುವ ಜಯದೇವ್ ಅವರ ಕೊನೆಯ ಪಂದ್ಯ ಇದಾಗಿತ್ತು. ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನಲ್ಲಿ 316 ರನ್, ದ್ವಿತೀಯ ಇನ್ನಿಂಗ್ಸ್ ನಲ್ಲಿ 79 ರನ್ ಗಳಿಸಿ ಆಟ ಮುಗಿಸಿತ್ತು.
ಆದರೆ ಕರ್ನಾಟಕ ಬ್ಯಾಟಿಂಗ್ ದೌರ್ಬಲ್ಯ ತೋರಿಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ದೇಗಾ ನಿಶ್ಚಲ್ 58, ಕರುಣ್ ನಾಯರ್ 63 ರನ್ ನೆರವಿನೊಂದಿಗೆ ವಿನಯ್ ಕುಮಾರ್ ಬಳಗ ಒಟ್ಟು 217 ರನ್ ಕಲೆ ಹಾಕಿದರೆ, ದ್ವಿತೀಯ ಇನ್ನಿಂಗ್ಸ್ ನಲ್ಲಿ ನಾಯರ್ 30, ಶ್ರೇಯಸ್ ಗೋಪಾಲ್ 27 ರನ್ ಬೆಂಬಲದೊಂದಿಗೆ 91 ರನ್ ಪೇರಿಸಿ ಶರಣಾಯಿತು.