
ದೇಸಿ ಟೂರ್ನಿಯಲ್ಲಿ ಸಾಕಷ್ಟು ಮಹತ್ವ ಪಡೆದಿರುವ ರಣಜಿ ಕ್ರೀಡಾ ಕೂಟ ಇಂದಿನಿಂದ ಆರಂಭವಾಗಿದೆ. 86ನೇ ಆವೃತ್ತಿಯ ಈ ಟೂರ್ನಿಯಲ್ಲಿ 38 ತಂಡಗಳು ಭಾಗವಹಿಸುತ್ತಿದೆ. ಇಂದಿನಿಂದ ಮಾರ್ಚ್ 13ರ ವರೆಗೆ ಈ ಮಹತ್ವದ ಕೂಟ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೆಣೆಸಾಟಕ್ಕೆ ಇಳಿದಿವೆ. ತಮಿಳುನಾಡಿನ ದಿಂಡಿಗಲ್ ಎನ್ಆರ್ಪಿ ಕಾಲೇಜು ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಸೀಮಿತ ಓವರ್ಗಳಲ್ಲಿ ಚಾಂಪಿಯನ್ ಆಗಿರುವ ಕರ್ನಾಟಕ ಇದೀಗ ರಣಜಿ ಟ್ರೋಪಿಯನ್ನೂ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕದ ಆಟಗಾರರು ರಣಜಿಯಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿದೆ. ಕರ್ನಾಟಕದ ಪರವಾಗಿ ದೇವ್ದತ್ ಪಡಿಕ್ಕಲ್ ಟೆಸ್ಟ್ ಮಾದರಿಯಲ್ಲೂ ಉತ್ತಮ ಫಾರ್ಮ್ಅನ್ನು ಮುಂದುವರಿಸಿದ್ದಾರೆ. 78 ರನ್ಗಳಿಸಿದ ಪಡಿಕ್ಕಲ್ ಶತಕದ ನಿರೀಕ್ಷೆ ಮೂಡಿಸಿದ್ರು. ಆದರೆ ತಮಿಳುನಾಡು ಸ್ಪಿನ್ ಬೌಲರ್ ಅಪರಾಜಿತ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ಮತ್ತೋರ್ವ ಆಟಗಾರ ಪವನ್ ದೇಶ್ಪಾಂಡೆ ಅರ್ಧಶತಕ ಸಿಡಿಸಿ ಉತ್ತಮ ಸಾಥ್ ನೀಡಿದರು. ಉಳಿದಂತೆ ಮೊದಲ ದಿನದಾಟದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಸಿಡಿಸಿದ 43 ರನ್ನೇ ಉತ್ತಮ ಮೊತ್ತವಾಗಿದೆ. ಮೊದಲ ದಿನದಂತ್ಯಕ್ಕೆ ಕರ್ನಾಟಕ 259 ಗಳಿಸಿದರೆ 6 ವಿಕೆಟ್ ಕಳೆದುಕೊಂಡಿದೆ.
ತಮಿಳುನಾಡು ಪರವಾಗಿ ಮಣಿಮರನ್ ಸಿದ್ಧಾರ್ಥ್ 2 ವಿಕೆಟ್ ಕಿತ್ತರೆ, ಕೃಷ್ಣ ಮೂರ್ತಿ ವಿಘ್ನೇಶ್, ರವಿಚಂದ್ರನ್ ಅಶ್ವಿನ್, ಸಾಯಿ ಕಿಶೋರ್, ಹಾಗೂ ಬಾಬಾ ಅಪರಾಜಿತ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.