ಸೋಮವಾರ, ಜನವರಿ 29ರಂದು ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2024ರ ರಣಜಿ ಟ್ರೋಫಿ ಗ್ರೂಪ್-ಸಿ ಪಂದ್ಯದ ಅಂತಿಮ ದಿನದಾಟದಲ್ಲಿ ಕರ್ನಾಟಕ ತಂಡವು ತ್ರಿಪುರ ವಿರುದ್ಧ 29 ರನ್ಗಳ ರೋಚಕ ಗೆಲುವು ಸಾಧಿಸಿತು.
193 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಆತಿಥೇಯ ತ್ರಿಪುರ ತಂಡವು ಮೂರು ವಿಕೆಟ್ಗೆ 59 ರನ್ಗಳ ಹಿಂದಿನ ದಿನದ ಸ್ಕೋರ್ನಿಂದ ಪ್ರಾರಂಭಿಸಿ, ಕೇವಲ 163 ರನ್ಗಳಿಗೆ ಆಲೌಟ್ ಆಯಿತು.

ಇಲ್ಲಿ ಗಳಿಸಿದ ಆರು ಅಂಕಗಳು ಗುಜರಾತ್ ಮತ್ತು ಗೋವಾ ವಿರುದ್ಧ ಎರಡು ಕೆಳಮಟ್ಟದ ಪಂದ್ಯಗಳ ನಂತರ, ಕರ್ನಾಟಕ ತನ್ನ ಅಭಿಯಾನವನ್ನು ಮರಳಿ ಟ್ರ್ಯಾಕ್ಗೆ ತರಲು ಸಹಾಯ ಮಾಡಿತು.
ಈ ಹಿಂದಿನ ಬಂಗಾಳದ ಅನುಭವಿ ಸುದೀಪ್ ಚಟರ್ಜಿ 144 ಎಸೆತಗಳಲ್ಲಿ 10 ಬೌಂಡರಿ ಸಮೇತ 82 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇನ್ನು ಗಣೇಶ್ ಸತೀಶ್ 22 ರನ್, ವೃದ್ಧಿಮಾನ್ ಸಹಾ 0 ಮತ್ತು ಬಿಕ್ರಮ್ಜಿತ್ ದೇಬನಾಥ್ 9 ರನ್ ಗಳಿಸಿದ್ದರಿಂದ ಸೂಕ್ತ ಬೆಂಬಲ ಸಿಗಲಿಲ್ಲ.
ಸೋಮವಾರ ಮುಂಜಾನೆ ಬ್ಯಾಟಿಂಗ್ ಎಲ್ಲಾ ರೀತಿಯ ಕಷ್ಟಕರವೆಂದು ಸಾಬೀತುಪಡಿಸಿತು. ಆದರೆ ಸುದೀಪ್ ಚಟರ್ಜಿ ಮತ್ತು ಗಣೇಶ್ ಸತೀಶ್ ದಿನದ ಮೊದಲ 7.2 ಓವರ್ಗಳಲ್ಲಿ 30 ರನ್ಗಳನ್ನು ಸೇರಿಸುವ ಮೂಲಕ ತ್ರಿಪುರ ತಂಡಕ್ಕೆ ಗೆಲುವಿನ ಭರವಸೆಯ ಮೂಡಿಸಿದ್ದರು.
ಆದರೆ, ಕರ್ನಾಟಕ ವೇಗಿ ವಿದ್ವತ್ ಕಾವೇರಪ್ಪ 44 ರನ್ ನೀಡಿ 4 ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು. ಕರ್ನಾಟಕ ಮಾಜಿ ಆಟಗಾರ ಗಣೇಶ್ ಸತೀಶ್ ಅವರ ವಿಕೆಟ್ ಪಡೆದರು. ನಂತರ ದೇಬನಾಥ್ ಅವರ ಕ್ಯಾಚ್ ಅನ್ನು ಶರತ್ ಶ್ರೀನಿವಾಸ್ ಪಡೆದರು.
ಈ ಎರಡು ವಿಕೆಟ್ಗಳ ನಂತರ ನಡುವೆ ತ್ರಿಪುರ ತಂಡ 6 ವಿಕೆಟ್ಗೆ 103 ರನ್ಗಳಿಗೆ ಕುಸಿದಿತ್ತು. ಈ ವೇಳೆ ಅನುಭವಿ ವೃದ್ಧಿಮಾನ್ ಸಹಾ ಕೂಡ ರನೌಟ್ ಆಗಿ ಹೊರನಡೆದರು.
ಬ್ಯಾಟಿಂಗ್ನಲ್ಲಿ ಅರ್ಧಶತಕ ಗಳಿಸಿದ್ದ ಸಹ ವೇಗಿ ವಿಜಯ್ಕುಮಾರ್ ವೈಶಾಕ್ ಅವರೂ ತಮ್ಮ ವೇಗದ ದಾಳಿಯಲ್ಲಿ ಮುರಾ ಸಿಂಗ್ ಮತ್ತು ಪರ್ವೇಜ್ ಸುಲ್ತಾನ್ ಅವರ ವಿಕೆಟ್ ಪಡೆಯುವ ಮೂಲಕ ತ್ರಿಪುರಾ ತಂಡವನ್ನು 8 ವಿಕೆಟ್ಗೆ 133 ರನ್ಗಳಿಗೆ ಕುಸಿಯುವಂತೆ ಮಾಡಿದರು.
ವಿಧ್ವತ್ ಕಾವೇರಪ್ಪ ಅವರು ರಾಣಾ ದತ್ತ ಅವರ ವಿಕೆಟ್ನ್ನು ತೆಗೆದುಹಾಕಿದಾಗ, ತ್ರಿಪುರ ಸ್ಕೋರ್ಬೋರ್ಡ್ 9 ವಿಕೆಟ್ಗೆ 138 ರನ್ಗಳಾಗಿದ್ದವು. ಆದರೆ ತ್ರಿಪುರ ಪರ ಸುದೀಪ್ ಚಟರ್ಜಿ ಮತ್ತು ಅಭಿಜಿತ್ ಸರ್ಕಾರ್ 25 ರನ್ಗಳ ಜೊತೆಯಾಟವನ್ನು ಸೇರಿಸಿದರು. ಆರ್.ಸಮರ್ಥ್ ಅವರು ಸುದೀಪ್ ಚಟರ್ಜಿ ವಿಕೆಟ್ ಪಡೆಯುವ ಮೂಲಕ ತ್ರಿಪುರ ತಂಡದ ಇನ್ನಿಂಗ್ಸ್ಗೆ ತೆರೆ ಎಳೆದರು.
"ನಾವು ಗೆಲುವಿನ ವಿಶ್ವಾಸ ಹೊಂದಿದ್ದೇವೆ. ನಮಗಾಗಿ ಕೆಲಸ ಮಾಡಲು ನಾವು ಮೂವರು ಉತ್ತಮ ವೇಗಿಗಳನ್ನು ಹೊಂದಿದ್ದೇವೆ ಮತ್ತು ನಾವು ಯಶಸ್ವಿಯಾಗಿದ್ದೇವೆ," ಎಂದು ಕರ್ನಾಟಕದ ಕೋಚ್ ಪಿ.ವಿ ಶಶಿಕಾಂತ್ ಹೇಳಿದರು.
"ಇದು ಹೊಸ ತಂಡವಾಗಿತ್ತು, ನಾಲ್ಕು ಚೊಚ್ಚಲ ಆಟಗಾರರು ಆಡಿದರು ಮತ್ತು ಅವರು ಹಿರಿಯ ಆಟಗಾರರೊಂದಿಗೆ ಚೆನ್ನಾಗಿ ಆಡಿದರು. ಕಿಶನ್ ಬೇಡರೆ 62 ಮತ್ತು 42 ರನ್ ಬ್ಯಾಟಿಂಗ್ ಮಾಡಿದ ರೀತಿ, ಅವರು ಅನುಭವಿ ಆಟಗಾರನಂತೆ ತೋರಿದರು, ಒಟ್ಟಾರೆ ತಂಡದ ಪ್ರದರ್ಶನದಿಂದ ಸಂತೋಷವಾಗಿದೆ," ಎಂದು ತಿಳಿಸಿದರು.
ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ 15 ಅಂಕಗಳೊಂದಿಗೆ ಇದೀಗ ಗ್ರೂಪ್-ಸಿ ಅಂಕಪಟ್ಟಿಯಲ್ಲಿ ತಮಿಳುನಾಡು ಜೊತೆ ಸಮಬಲದಲ್ಲಿದೆ. ಮುಂದಿನ ಪಂದ್ಯವು ಫೆಬ್ರವರಿ 2ರಿಂದ ರೈಲ್ವೇಸ್ ವಿರುದ್ಧ ಆಡಲು ಸೂರತ್ಗೆ ಪ್ರಯಾಣಿಸಲಿದೆ.