ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಬಗ್ಗೆ ಇರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರು ಬಹಳ ಸಮಯದಿಂದ ಭಾರತ ಪರ ಆಡಲು ಸಾಧ್ಯವಾಗಿಲ್ಲ. ಆದರೆ ಕೆಲವು ವರದಿಗಳಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಮರಳಬಹುದು ಎಂದು ಹೇಳಲಾಗುತ್ತಿದೆ. ಇದುವರೆಗೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚೆಗೆ ಫಿಟ್ನೆಸ್ ಕಾರಣದಿಂದಾಗಿ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿಯಬಹುದು ಎಂಬ ಸುದ್ದಿಗಳು ವೈರಲ್ ಆಗಿದ್ದವು. ಈ ವೇಳೆ ಶಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ಹೇಳಿದ್ದರು. ಇದೀಗ ಅವರ ಫಿಟ್ನೆಸ್ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.

2023 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಶಮಿ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಸ್ನಾಯುರಜ್ಜು ಗಾಯಕ್ಕೆ ತುತ್ತಾಗದ್ದ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಕಳೆದ ಒಂದು ವರ್ಷದಲ್ಲಿ, ಶಮಿ ವಿವಿಧ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಂಥದ್ದೊಂದು ಸುದ್ದಿ ಹೊರಬಿದ್ದಿದ್ದು, ಶಮಿ ತಂಡಕ್ಕೆ ವಾಪಸಾಗಲು ಇನ್ನೂ ಕೆಲವು ದಿನಗಳು ಸಾಕು ಎನ್ನಲಾಗುತ್ತಿತ್ತು. ಇದರ ಬೆನ್ನಲ್ಲೇ ಅವರು ಬಂಗಾಳದ ರಣಜಿ ತಂಡಕ್ಕೆ ಆಯ್ಕೆಯಾಗಿಲ್ಲ. ಮತ್ತೊಂದೆಡೆ ಅನುಭವಿ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ವೃದ್ದಿಮಾನ್ ಸಹಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಭಾರತ ರಾಷ್ಟ್ರೀಯ ತಂಡದ ಯಾವುದೇ ಆಟಗಾರ ಫಿಟ್ನೆಸ್ನಿಂದಾಗಿ ದೀರ್ಘ ಕಾಲ ಹೊರಗಿದ್ದರೆ ದೇಶೀಯ ಪಂದ್ಯಗಳಲ್ಲಿ ಆಡಬೇಕು. ಅಲ್ಲಿ ಫಿಟ್ನೆಸ್ ಸಾಬೀತು ಮಾಡಿದ ನಂತರವೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಬಿಸಿಸಿಐ ಕೆಲವು ದಿನಗಳಿಂದ ಒತ್ತಿಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಬಂಗಾಳ ರಣಜಿ ತಂಡಕ್ಕೆ ಆಯ್ಕೆಯಾಗದ ಶಮಿ ನೇರವಾಗಿ ಟೀಮ್ ಇಂಡಿಯಾಗೆ ಬರುತ್ತಾರೋ? ಇಲ್ಲವೋ? ಎಂಬುದು ಕುತೂಹಲ ಮೂಡಿಸಿದೆ.
ಭಾರತ ತಂಡಕ್ಕೆ ಶಮಿ ಮರಳಲು ಇನ್ನೂ ಕೆಲವು ವಾರಗಳು ಬೇಕು ಎಂದು ವರದಿಗಳು ಹೇಳುತ್ತಿವೆ. ಒಂದು ವೇಳೆ ಅವರು ಫಿಟ್ ಆಗಿದ್ದರೆ ಬಂಗಾಳ ರಣಜಿ ತಂಡಕ್ಕೆ ಮಧ್ಯಂತರದಲ್ಲಿ ಸೇರ್ಪಡೆಯಾಗಬಹುದು. ಈ ಸಂದರ್ಭದಲ್ಲಿ ಅವರು ಒಂದು ಅಥವಾ ಎರಡು ರಣಜಿ ಪಂದ್ಯಗಳನ್ನು ಆಡುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಅವಕಾಶವನ್ನು ಹೊಂದಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾದಿಂದ ಸುದೀರ್ಘ ಕಾಲ ಹೊರಗಿದ್ದ ವಿಕೆಟ್ ಕೀಪರ್- ಬ್ಯಾಟರ್ ವೃದ್ಧಿಮಾನ್ ಸಹಾ ಅವರನ್ನು ಬಂಗಾಳ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಇವರಲ್ಲದೆ ಸುದೀಪ್ ಚಟರ್ಜಿ ಕೂಡ ಕಮ್ ಬ್ಯಾಕ್ ಮಾಡಿದ್ದಾರೆ. ಸಹಾ ಅವರು 2021ರ ಡಿಸೆಂಬರ್ ತಿಂಗಳಲ್ಲಿ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಭಾತರ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತಕ್ಕೆ 40 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವವನ್ನು ಸಹಾ ಹೊಂದಿದ್ದಾರೆ. 2007ರಲ್ಲಿ ಬಂಗಾಳ ತಂಡಕ್ಕೆ ಪಾದಾರ್ಪಣೆ ಮಾಡಿದ ಸಹಾ, 2022ರಲ್ಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳೊಂದಿಗೆ ವಿವಾದದ ನಂತರ ತ್ರಿಪುರಾ ತಂಡಕ್ಕೆ ಮೆಂಟರ್ ಮತ್ತು ಆಟಗಾರನಾಗಿ ಸೇರಿಕೊಂಡಿದ್ದರು. ಈ ವರ್ಷ ಮರಳಿ ಬಂಗಾಳ ತಂಡಕ್ಕೆ ಮರಳಿದ್ದಾರೆ.
ಬಂಗಾಳ ರಣಜಿ ತಂಡ: ಅನುಸ್ತುಪ್ ಮಜುಂದಾರ್ (ನಾಯಕ), ಅಭಿಮನ್ಯು ಈಶ್ವರನ್, ಸುದೀಪ್ ಘರಾಮಿ, ಸುದೀಪ್ ಚಟರ್ಜಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಭಿಷೇಕ್ ಪೊರೆಲ್, ವೃತಿಕ್ ಚಟರ್ಜಿ, ಅವಿಲಿನ್ ಘೋಷ್, ಶುಭಂ ಡೇ, ಆಕಾಶ್ ದೀಪ್, ಮುಖೇಶ್ ಕುಮಾರ್, ಸೂರಜ್ ಜೈಸ್ವಾಲ್, ಪ್ರಮದ್ ಜೈಸ್ವಾಲ್, ಪ್ರಮಾಣಿಕ್, ಅಮೀರ್ ಘನಿ, ಯುಧ್ಜಿತ್ ಗುಹಾ, ರೋಹಿತ್ ಕುಮಾರ್, ರಿಷಬ್ ವಿವೇಕ್.