ಉತ್ತರ ಪ್ರದೇಶ ರಣಜಿ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ನಿತೀಶ್ ರಾಣಾ, ಅಕ್ಷದೀಪ್ ನಾಥ್ ಸೇರಿದಂತೆ ಹಲವು ಅನುಭವಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ತಂಡದ ನಾಯಕತ್ವವನ್ನು ಆರ್ಯನ್ ಜುಯಲ್ ಅವರಿಗೆ ನೀಡಲಾಗಿದೆ.
ಉತ್ತರ ಪ್ರದೇಶ ರಣಜಿ ತಂಡದಲ್ಲಿ ಭಾರತ ತಂಡದಿಂದ ದೂರ ಉಳಿದಿರುವ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಕುಲದೀಪ್ ಯಾದವ್ ಅವರು ಸ್ಥಾನ ಪಡೆದಿಲ್ಲ. ಜೀಶನ್ ಅನ್ಸಾರಿ ಮತ್ತು ಸಮೀರ್ ರಿಜ್ವಿ ತಂಡದಲ್ಲಿ ಸ್ಥಾನ ಪಡೆಯದಿರುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗೆ ನಡೆದ ಟಿ20 ಯುಪಿ ಪ್ರೀಮಿಯರ್ ಲೀಗ್ನಲ್ಲಿ ಲಕ್ನೋ ತಂಡದ ಪರ ಜೀಶನ್ ಅನ್ಸಾರಿ ಮತ್ತು ಮೀರತ್ನ ಸಮೀರ್ ರಿಜ್ವಿ ಅದ್ಭುತ ಪ್ರದರ್ಶನ ನೀಡಿದ್ದರು. ಮತ್ತೊಂದೆಡೆ ಕೃತಜ್ಞ ಕೆ ಸಿಂಗ್ ಮತ್ತು ವಿಪ್ರರಾಜ್ ನಿಗಮ್ ಅವರು ಮೊದಲ ಬಾರಿಗೆ ಉತ್ತರ ಪ್ರದೇಶದ ರಣಜಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ತಂಡದ ನಾಯಕತ್ವವನ್ನು ಅನುಭವಿ ಆರ್ಯನ್ ಜುಯಲ್ ಅವರಿಗೆ ನೀಡಲಾಗಿದ್ದು, ಅಂಕಿತ್ ರಜಪೂತ್ ಮತ್ತು ಯಶ್ ದಯಾಳ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2005-06 ರಲ್ಲಿ ಉತ್ತರ ಪ್ರದೇಶ ಮೊದಲ ಬಾರಿಗೆ ರಣಜಿ ಚಾಂಪಿಯನ್ ಆಗಿತ್ತು. ಇದಾದ ಬಳಿಕ ಈ ಟೂರ್ನಿಯಲ್ಲಿಉತ್ತರ ಪ್ರದೇಶ 5 ಬಾರಿ ರನ್ನರ್ ಅಪ್ ಆಗಿದೆ.
ಆರಂಭಿಕ ಬ್ಯಾಟರ್ ಆರ್ಯನ್ ಜುಯಲ್ 2011 ರಿಂದ ಉತ್ತರ ಪ್ರದೇಶ ತಂಡದ ಭಾಗವಾಗಿದ್ದಾರೆ. ಅವರು ಉತ್ತರ ಪ್ರದೇಶದ ಪರ 14 ವರ್ಷದೊಳಗಿನವರ ತಂಡದಲ್ಲಿಯೂ ಆಡಿದ್ದಾರೆ. ಇದಲ್ಲದ, ಅಂಡರ್-16, ಅಂಡರ್-19, ಅಂಡರ್-23 ಸೇರಿದಂತೆ ಹಿರಿಯರ ತಂಡವನ್ನು ಪ್ರತಿನಿಧಿಸಿದ್ದಾರೆ. ಆರ್ಯನ್ ಜುಯಲ್ ತಮ್ಮ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಭಾರತ ಅಂಡರ್-19 ತಂಡ ಮತ್ತು ಅಂಡರ್-23 ತಂಡದಲ್ಲಿ ಸ್ಥಾನ ಪಡೆದಿದ್ದರು. ಅವರು ಭಾರತದ ಅಂಡರ್-19 ಏಕದಿನ ತಂಡದ ನಾಯಕರೂ ಆಗಿದ್ದಾರೆ. ಇಂತಹ ಬಹುಮುಖ ಪ್ರತಿಭೆ ಈ ಬಾರಿಯೂ ಉತ್ತರ ಪ್ರದೇಶ ತಂಡವನ್ನು ರಣಜಿ ಟ್ರೋಫಿ ಟೂರ್ನಿಯಲ್ಲಿ ಮುನ್ನಡೆಸಲಿದ್ದಾರೆ.
ಆರ್ಯನ್ ಜುಯಲ್ (ನಾಯಕ), ಸ್ವಸ್ತಿಕ್ ಚಿಕಾರಾ, ಪ್ರಿಯಮ್ ಗರ್ಗ್, ಅಕ್ಷದೀಪ್ ನಾಥ್, ನಿತೀಶ್ ರಾಣಾ, ಸೌರಭ್ ಕುಮಾರ್, ಅಂಕಿತ್ ರಜಪೂತ್, ಆಕಿಬ್ ಖಾನ್, ವಿಪ್ರರಾಜ್ ನಿಗಮ್, ಯಶ್ ದಯಾಳ್, ಶಿವಂ ಶರ್ಮಾ ಸಿದ್ಧಾರ್ಥ್ ಯಾದವ್, ಮಾಧವ್ ಕೌಶಿಕ್, ವಿಜಯ್ ಕುಮಾರ್, ಆದಿತ್ಯ ಶರ್ಮಾ (ವಿಕೆಟ್ ಕೀಪರ್), ಕೃತಜ್ಞ ಕೆ ಸಿಂಗ್
ಮೀಸಲು ಆಟಗಾರರು: ಅಟಲ್ ಬಿ ರೈ, ಪ್ರಿನ್ಸ್ ಯಾದವ್, ಅಭಿಷೇಕ್ ಗೋಸ್ವಾಮಿ, ವಿನೀತ್ ಪನ್ವಾರ್, ವೈಭವ್ ಕಾರ್ತಿಕ್ ಚೌಧರಿ.